ಗದಗ: ಕಳೆದ ರಾತ್ರಿ ಗದಗ ಜಿಲ್ಲೆಯ ಸೂರಣಗಿಯಲ್ಲಿ ನಟ ಯಶ್ ಅವರ ಬರ್ತಡೇ ಸಂಭ್ರಮ ಎಂದು ನಟನ ಕಟ್ ಔಟ್ ಹಾಕಲು ಹೋಗಿ ವಿದ್ಯುತ್ ತಂತಿ ತಗುಲಿ ಮೂರು ಜನ ದುರ್ದೈವಿಗಳು ಸಾವನ್ನುಪ್ಪಿರುವ ಘಟನೆ ನಡೆದಿದೆ.
ಇನ್ನು ಜಿಲ್ಲಾಧಿಕಾರಿ ವೈಶಾಲಿಯವರು ಮೃತರ ಕುಟುಂಬಗಳಿಗೆ ಭೇಟಿ ಮಾಡಿ ಸಂತಾಪ ಸೂಚಿಸಿದ್ದಾರೆ. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಮೃತ ಹಣಮಂತು, ನವೀನ್, ಮತ್ತು ಮುರಳಿಯನ್ನು ಮಕ್ಕಳು ಅಂತ ಸಂಬೋಧಿಸಿದರು.
ಕುಟುಂಬಗಳಿಗೆ ಇದು ತುಂಬಲಾಗದ ನಷ್ಟ, ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಹೆಚ್ ಕೆ ಪಾಟೀಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತರ ಕುಟುಂಬಗಳ ಪರಿಹಾರ ಒದಗಿಸಲು ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದಾರೆ ಎಂದು ಹೇಳಿದರು.
ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ರಾಜ್ಯ ಸರ್ಕಾರ ಮೃತರ ಕುಟುಬಗಳಿಗೆ ತಲಾ ರೂ. 2 ಲಕ್ಷ ಮತ್ತು ಗಾಯಗೊಂಡಿರುವವರಿಗೆ ತಲಾ ರೂ. 50,000 ಪರಿಹಾರ ಘೋಷಿಸಿದೆ. ಸೂರಣಗಿಯಲ್ಲಿ ಒಬ್ಬ ಖಾಯಂ ವೈದ್ಯನ ವ್ಯವಸ್ಥೆ ಮಾಡುವುದಾಗಿ ಜಿಲ್ಲಾಧಿಕಾರಿ ವೈಶಾಲಿ ಹೇಳಿದರು,