ರಾಯಚೂರು : ರಾಜ್ಯದ ಜನರು ಕುಡಿವ ನೀರಿನಲ್ಲಿ ಅಧಿಕ ಪ್ರಮಾಣದ ಯುರೇನಿಯಂ ಎಂಬ ವಿಷವಿದೆ. ಹೆಚ್ಚು ಪ್ರಮಾಣದಲ್ಲಿ ಯುರೇನಿಯಂಯುಕ್ತ ನೀರು ಕುಡಿವುದರಿಂದ ಕಿಡ್ನಿ, ಕ್ಯಾನ್ಸರ್, ಥೈರಾಡ್, ಮೂಳೆರೋಗ ಸೇರಿದಂತೆ ವಿವಿಧ ಕಾಯಿಲೆಗಳು ಬರುತ್ತಿವೆ. ರಾಜ್ಯದ 8 ಜಿಲ್ಲೆಗಳ ಕುಡಿಯುವ ನೀರಿನಲ್ಲಿ ಯುರೇನಿಯಂ ಅಧಿಕ ಪ್ರಮಾಣದಲ್ಲಿದೆಯಂತೆ. ಕೇಂದ್ರದ ಭೂ ಜಲಶಕ್ತಿ ಸಚಿವಾಲಯ ಬಿಡುಗಡೆ ಮಾಡಿದ ವರದಿಯಲ್ಲಿ ಆತಂಕಕಾರವಾಗಿದೆ.
ರಾಜ್ಯದಲ್ಲಿ 201 ಎಂಜಿ/ಲೀಟರ್ ಇರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಇದು ಕೇವಲ ಸ್ಯಾಂಪಲ್ ಮಾತ್ರ, ರಾಜ್ಯದಲ್ಲಿ ವ್ಯಾಪಕವಾಗಿ ಯುರೇನಿಯಂಯುಕ್ತ ನೀರು ಇರುವ ಸಾಧ್ಯತೆ ಇದೆ. ಕೇಂದ್ರ ಜಲಶಕ್ತಿ ಸಚಿವಾಲಯದ ಜಲಸಂಪನ್ಮೂಲ, ನದಿಗಳ ಅಭಿವೃದ್ದಿ ಮತ್ತು ಗಂಗಾ ಪುನಶ್ಚೇತನ ಇಲಾಖೆಯು ದೇಶದ 18 ರಾಜ್ಯಗಳಲ್ಲಿ 151 ಜಿಲ್ಲೆಗಳಲ್ಲಿ ಯುರೇನಿಯಂ ಅಂಶ ಅಧಿಕವಿರುವ ಬಗ್ಗೆ ಸಮೀಕ್ಷೆ ನಡೆಸಿದ್ದು, ತೆರೆದ ಬಾವಿ, ಕೊಳವೆ, ಕೈಪಂಪು ಸೇರಿದಂತೆ ಜಲಮೂಲಗಳಲ್ಲಿ ಒಟ್ಟು 1500 ಕಡೆ ನೀರಿನ ಮಾದರಿ ಸಂಗ್ರಹಿಸಿದೆ. ಇವುಗಳಲ್ಲಿ ಯುರೇನಿಯಂ ನಿಗಿದಿತ ಪ್ರಮಾಣಕ್ಕಿಂತ ಅಧಿಕವಾಗಿರುವುದು ಕಂಡು ಬಂದಿದೆ.
ಬೆಳೆಗಾಗಿ ಅಧಿಕ ರಸಾಯನಿಕ ಬಳಕೆ, ಅಂತರ್ಜಲ ಮಟ್ಟ ಕುಸಿತದಿಂದಾಗಿ ಅಂತರ್ಜಲದಲ್ಲಿ ಯುರೇನಿಯಂ ಅಂಶ ಅಧಿಕವಾಗಿದೆ. ಇದರಿಂದ ಜನರು ಜಾಗೃತರಾಗಿ, ಶುದ್ಧೀಕರಿಸಿದ ಕುಡಿವ ನೀರನ್ನು ಬಳಕೆ ಮಾಡಬೇಕು. ಸರಕಾರ ಸಹ ಶುದ್ದ ಕುಡಿವ ನೀರಿನ ವ್ಯವಸ್ಥೆಯನ್ನು ಎಲ್ಲಾ ಕಡೆಯೂ ಅಳವಡಿಸಬೇಕಿದೆ. ಈ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ದಿ ಸಚಿವರು ಸಹ ಹೇಳಿದ್ದಾರೆ.