ಪಾಪಿ ತಂದೆಗೆ ಗಲ್ಲು ಶಿಕ್ಷೆ

ಪಾಪಿ ತಂದೆಗೆ ಗಲ್ಲು ಶಿಕ್ಷೆ

ಬೆಂಗಳೂರು, ಮಾ.21 : ಕೌಟುಂಬಿಕ ಕಲಹದ ವಿಚಾರವಾಗಿ ಹೆತ್ತ ಮಕ್ಕಳನ್ನೇ ಕೊಲೆ ಮಾಡಿದ್ದ ಸತೀಶ್ ಕುಮಾರ್ಎಂಬಾತನಿಗೆ ಗಲ್ಲು ಶಿಕ್ಷೆ ವಿಧಿಸಿ ವಿಧಿಸಿ ಬೆಂಗಳೂರಿನ 46ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
2016ರ ನವೆಂಬರ್16ರಂದು ಆರೋಪಿ ತನ್ನ ಮಕ್ಕಳಾದ ಶಿವಶಂಕರ್ (5) ಮತ್ತು ಆದಿತ್ಯ (4) ಎಂಬುವರನ್ನು ಉಳಿಯಿಂದ ಭೀಕರವಾಗಿ ಮನೆಯಲ್ಲೇ ಕೊಲೆ ಮಾಡಿದ್ದ. ಈ ಸಂಬಂಧ ಸತೀಶ್ಕುಮಾರ್ ಪತ್ನಿ ಜ್ಯೋತಿ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಜ್ಯೋತಿ ಮತ್ತು ಸತೀಶ್ಕುಮಾರ್ ನಡುವೆ ಆರು ವರ್ಷಗಳ ಹಿಂದೆ ವಿವಾಹವಾಗಿತ್ತು. ದಂಪತಿ ಚುಂಚಘಟ್ಟ ಮುಖ್ಯ ರಸ್ತೆಯ ಬೀರೇಶ್ವರ ನಗರದಲ್ಲಿ ವಾಸವಿದ್ದರು. ಸಣ್ಣ ಪುಟ್ಟ ಕೂಲಿ ಕೆಲಸ ಮಾಡುತ್ತಿದ್ದ ಸತೀಶ್ಕುಮಾರ್, ಮದ್ಯವ್ಯಸನಿಯಾಗಿದ್ದ. ದುಡಿದ ಹಣವನ್ನು ಮದ್ಯ ಸೇವನೆಗೆ ಖರ್ಚು ಮಾಡುತ್ತಿದ್ದ. ಕುಟುಂಬ ನಿರ್ವಹಣೆಗೆ ಹಣ ನೀಡುತ್ತಿರಲಿಲ್ಲ. ಮನೆಗೆಲಸ ಮಾಡಿಕೊಂಡು ದುಡಿಮೆ ಮಾಡುತ್ತಿದ್ದ ಜ್ಯೋತಿಯೇ ಮನೆಯನ್ನು ಸಂಪೂರ್ಣವಾಗಿ ನೋಡಿಕೊಳ್ಳುತ್ತಿದ್ದಳು. ಇಬ್ಬರು ಮಕ್ಕಳನ್ನು ಸಮೀಪದ ಅಂಗನವಾಡಿಗೆ ಸೇರಿಸಿದ್ದರು.

ಕ್ಷುಲ್ಲಕ ವಿಚಾರಕ್ಕೆ ಕೊಲೆ : ಬೆಳಗ್ಗೆ ಮನೆಕೆಲಸಕ್ಕೆ ಹೋಗುತ್ತಿದ್ದ ಜ್ಯೋತಿ, ”ಸಾಂಬಾರು ಮಾಡಲು ಇಟ್ಟಿದ್ದೇನೆ, ಅದು ಬೆಂದ ಬಳಿಕ ತೆಗೆದಿಡಿ. ಮಕ್ಕಳಿಗೆ ಊಟ ಬಡಿಸಿ” ಎಂದು ಪತಿಗೆ ತಿಳಿಸಿದ್ದರು. ಕೆಲಸ ಮುಗಿಸಿ ಮನೆಗೆ ವಾಪಸ್ ಬಂದಾಗ ಒಲೆಯ ಮೇಲೆ ಪಾತ್ರೆ ಹಾಗೆಯೇ ಇತ್ತು. ಸಾಂಬಾರು ಪಾತ್ರೆ ಸುಟ್ಟು ಕರಕಲಾಗಿತ್ತು. ಈ ವಿಚಾರವಾಗಿ ಜ್ಯೋತಿ ಮತ್ತು ಸತೀಶ್ಕುಮಾರ್ ನಡುವೆ ಜಗಳ ನಡೆದಿತ್ತು. ನಂತರ ಜ್ಯೋತಿ ಇಬ್ಬರು ಮಕ್ಕಳನ್ನು ಕರೆದುಕೊಂಡು ಸಮೀಪದಲ್ಲೇ ಇರುವ ತಾಯಿ ಮನೆಗೆ ತೆರಳಿದ್ದರು. ಮರುದಿನ ಬೆಳಗ್ಗೆ ಜ್ಯೋತಿಯ ಸಹೋದರಿ ಇಬ್ಬರು ಮಕ್ಕಳನ್ನು ಅಂಗನವಾಡಿಗೆ ಬಿಟ್ಟು ಹೋಗಿದ್ದರು. ಅಂಗನವಾಡಿಗೆ ತೆರಳಿದ ಸತೀಶ್ ಕುಮಾರ್ ಅವರನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಮಧ್ಯಾಹ್ನ 1 ಗಂಟೆಗೆ ಕೆಲಸ ಮುಗಿಸಿಕೊಂಡು ಜ್ಯೋತಿ ಮನೆಗೆ ಬಂದಾಗ ಇಬ್ಬರು ಮಕ್ಕಳು ಮೃತಪಟ್ಟಿರುವುದು ಕಂಡು ಬಂದಿದೆ. ಕೌಟುಂಬಿಕ ಕಲಹದಿಂದ ಪತ್ನಿ ಮೇಲಿನ ಕೋಪಕ್ಕೆ ಇಬ್ಬರು ಮಕ್ಕಳನ್ನು ಸತೀಶ ಉಳಿಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದ. ಈ ಸಂಬಂಧ ಜ್ಯೋತಿ ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

Related