ಅಯೋಧ್ಯೆ : ಅಯೋಧ್ಯೆ ಶ್ರೀರಾಮ ಜನ್ಮಭೂಮಿ ದೇವಾಲಯದ ನಿರ್ಮಾಣವು ಮೇ-26ರಂದು ಅಧಿಕೃತವಾಗಿ ಪ್ರಾರಂಭವಾಗಿದೆ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯಗೋಪಾಲ್ ದಾಸ್ ಘೋಷಿಸಿದ್ದಾರೆ. ಫೈಬರ್ ನಿಂದ ನಿರ್ಮಿಸಲಾದ ಈ ಹೊಸ ರಚನೆಯು ಮಾನಸ ಭವನದಲ್ಲಿದೆ.
ಈ ಹಿಂದೆ ನೆಲದಲ್ಲಿ ಹೂತುಹೋಗಿದ್ದ ಶಿಲೆಗಳನ್ನು ತೆಗೆದು ನೆಲವನ್ನು ಸಮಗೊಳಿಸುವ ಕಾರ್ಯ ನಡೆದಿದ್ದು ಈ ಪ್ರಕ್ರಿಯೆಯಲ್ಲಿಯೇ ಐದು ಅಡಿ ಶಿವಲಿಂಗ, ಏಳು ಕಂಬಗಳ ಕಪ್ಪು ಶಿಲಾರಚನೆ, ಆರು ಕಂಬಗಳ ಕೆಂಪು ಮರಳುಗಲ್ಲು ಮತ್ತು ದೇವ-ದೇವತೆಗಳ ಮುಕ್ಕಾದ ವಿಗ್ರಹಗಳು ಪತ್ತೆಯಾಗಿದ್ದವು.
ಅಲ್ಲದೆ, ಲಾಕ್ಡೌನ್ ಮತ್ತು ಕೊರೋನಾ ಬಿಕ್ಕಟ್ಟು ಅಯೋಧ್ಯೆಯಲ್ಲಿ ರಾಮ ದೇವಾಲಯದ ನಿರ್ಮಾಣದ ಜವಾಬ್ದಾರಿಯನ್ನು ಹೊಂದಿರುವ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ದೇಣಿಗೆ ನೀಡುವುದಕ್ಕೆ ಯಾವ ಅಡ್ಡಿಯನ್ನೂ ತರಲಿಲ್ಲ. ಲಾಕ್ಡೌನ್ ಅವಧಿಯಲ್ಲಿ ಟ್ರಸ್ಟ್ನ ಎರಡು ಖಾತೆಗಳಲ್ಲಿ 4.60 ಕೋಟಿ ರೂ. ಸಂಗ್ರಹವಾಗಿದೆ ಎಂದು ಮಹಂತ್ ಹೇಳಿದ್ದಾರೆ.