ಯಶವಂತಪುರ : ಗ್ರಾಮೀಣ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
ಅಜ್ಜನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಬ್ಯಾಲಾಳು, ಚಂದ್ರಪ್ಪ ಸರ್ಕಲ್, ಹುಣ್ಣಿಗೆರೆ, ಆಲಮ್ಮನ ಪಾಳ್ಯ ಗ್ರಾಮಗಳಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಜನತೆಯ ಅಭಿಲಾಷೆಯಂತೆ ಅಗತ್ಯ ಮೂಲ ಸೌಕರ್ಯ ಒದಗಿಸಿ ಮಾದರಿ ಕ್ಷೇತ್ರವಾಗಿಸಲು ದೃಢಸಂಕಲ್ಪ ಮಾಡಲಾಗಿದೆ ಎಂದರು.
ಗ್ರಾ.ಪಂ ಸದಸ್ಯ ಮಂಜುನಾಥ್ ಮಾತನಾಡಿ, ಅಧಿಕಾರ, ಅಂತಸ್ತು ಶಾಶ್ವತವಲ್ಲ ಸಂಕಷ್ಟದ ವಿಷಮ ಪರಿಸ್ಥಿತಿಯಲ್ಲಿ ತೊಂದರೆಗೆ ಸಿಲುಕಿರುವವವರಿಗೆ ಮಾನವೀಯ ನೆಲೆಯಲ್ಲಿ ನೆರವು ನೀಡಿ ಮಾನವ ಧರ್ಮ ಪಾಲಿಸುತ್ತಿರುವ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ರವರ ಸಾಮಾಜಿಕ ಬದ್ಧತೆ, ಸೇವಾಮನೋಭಾವ ಮಾದರಿಯಾಗಿದೆ ಎಂದರು.
ಜನತೆ ಅಧಿಕಾರ ನೀಡಿದ್ದಾರೆ ಅವರ ಸಂಕಷ್ಟಗಳಿಗೆ ಮಿಡಿಯ ಬೇಕಾಗಿರುವುದು ನಮ್ಮ ಕರ್ತವ್ಯವಾಗಿದ್ದು, ಅವರು ನಿರೀಕ್ಷೆಯಿಟ್ಟು ಅಧಿಕಾರ ನೀಡಿದ್ದಾರೆ. ಜನತೆ ನಿರೀಕ್ಷೆಗೆ ತಕ್ಕಂತೆ ಸರ್ಕಾರದಿಂದ ದೊರಕುವ ಸೌಲಭ್ಯಗಳ ಬಗ್ಗೆ ಅಗತ್ಯ ಮಾಹಿತಿ ನೀಡಿ ನಾಗರೀಕರ ಜೀವನ ಕ್ರಮ ಉತ್ತಮ ಪಡಿಸಿಕೊಳ್ಳಲು ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಡಿ.ಹನುಮಂತಯ್ಯ, ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಮ್ಮ ಕೃಷ್ಣಪ್ಪ, ಉಪಾಧ್ಯಕ್ಷ ನರಸಿಂಹಮೂರ್ತಿ, ಗ್ರಾ.ಪಂ ಸದಸ್ಯರಾದ ದೇವರಾಜು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪಿ.ಬಿಂಧು, ಕಾರ್ಯದರ್ಶಿ ವಿಜಯಕುಮಾರ್ ಇದ್ದರು.