ಶಿವಮೊಗ್ಗ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು, ರಾಜಕೀಯ ಚಟುವಟಿಕೆಗಳಲ್ಲಿ ಚದುರಂಗದ ಆಟವನ್ನು ಶುರು ಮಾಡಿವೆ.
ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವನ್ನು ಸಾಧಿಸಿರುವ ಕಾಂಗ್ರೆಸ್ ಪಕ್ಷವು ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಸಹ ಭರ್ಜರಿ ಗೆಲುವು ಸಾಧಿಸಬೇಕೆಂದು ಈಗಾಗಲೇ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ.
ಹೌದು, ಮಲೆನಾಡಿನಲ್ಲೂ ಸಹ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಮತ್ತೆ ರಾಜಕೀಯ ಶುರುವಾಗಿದೆ. ಶರಾವತಿ ಮುಳುಗಡೆ ಸಂತ್ರಸ್ತರನ್ನು ಟ್ರಂಪ್ ಕಾರ್ಡ್ಗಳನ್ನಾಗಿ ಬಳಸಿಕೊಳ್ಳಲು ರಾಜಕೀಯ ಪಕ್ಷಗಳು ಪ್ಲ್ಯಾನ್ ಮಾಡುತ್ತಿವೆ.
ಶರಾವತಿ ಸಂತ್ರಸ್ತರ ಮೇಲೆ ರಾಜಕೀಯ ಮುಖಂಡರಿಗೆ ಇಷ್ಟು ದಿನ ಇಲ್ಲದ ಪ್ರೀತಿ, ಚುನಾವಣೆ ಹತ್ತಿರ ಬರುತ್ತಿದ್ದಂತೆ ಉಕ್ಕಿ ಹರಿಯುತ್ತಿದೆ. ಸಂತ್ರಸ್ತರ ಪರವಾಗಿ ಎಲ್ಲಾ ರಾಜಕೀಯ ಪಕ್ಷಗಳು ಬ್ಯಾಟಿಂಗ್ ಮಾಡುತ್ತಿವೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ಧ ಹೋರಾಟ ರೂಪಿಸಿತ್ತು. ಸಂತ್ರಸ್ತರನ್ನು ಒಟ್ಟುಗೂಡಿಸಿ, ಜನಾಕ್ರೋಶ ಸಭೆ ನಡೆಸಿ, ಕಾಂಗ್ರೆಸ್ ಯಶಸ್ಸು ಕಂಡಿತ್ತು. ಇದೀಗ ಲೋಕ ಸಮರ ಸಮಯದಲ್ಲೂ ಕಾಂಗ್ರೆಸ್ ಅದೇ ದಾಳ ಪ್ರಯೋಗಿಸುತ್ತಿದೆ. ಜಿಲ್ಲೆಯ ಕಾಂಗ್ರೆಸ್ ನಾಯಕರು ಸಂಸದರ ವಿರುದ್ಧ ಮುಗಿಬಿದ್ದಿದ್ದಾರೆ.