ನವದೆಹಲಿ: 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದೆಹಲಿಯ ಕೆಂಪು ಕೋಟೆಯ ಸುತ್ತ ಶನಿವಾರ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕೈಟ್ ಕ್ಯಾಚರ್ಸ್ ಪಡೆ, ಶ್ವಾನ ದಳ ಮತ್ತು ಶಾರ್ಪ್ ಶೂಟರ್ಸ್ ಪಡೆಗಳನ್ನು ಕೆಂಪು ಕೋಟೆಯ ಸುತ್ತಲಿರುವ ಎತ್ತರದ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಎರಡು ಪೊಲೀಸ್ ಕಂಟ್ರೋಲ್ ರೂಮ್ ಬಳಸಿಕೊಂಡು 350 ಕ್ಯಾಮೆರಾಗಳ ಮುಖಾಂತರ ಪ್ರತಿಕ್ಷಣದ ಚಲನವಲನಗಳ ಮೇಲೆ ನಿಗಾ ಇರಿಸಲಾಗುತ್ತಿದೆ. ಕೋವಿಡ್ ನಿಯಮಗಳ ಪಾಲನೆಯನ್ನು ಅನುಷ್ಠಾನಗೊಳಿಸಲು ಹಾಗೂ ಭದ್ರತೆಯನ್ನು ಕಾಪಾಡಲು 5000ದಷ್ಟು ಭದ್ರತಾ ಪಡೆಯ ಸಿಬ್ಬಂದಿಗಳು ಕೆಂಪು ಕೋಟೆಯಲ್ಲಿ ಇರಲಿದ್ದಾರೆ.
ಹಿಂದೆಂದೂ ಕೈಗೊಳ್ಳದ ವಿಶೇಷ ಭದ್ರತಾ ಕ್ರಮವೊಂದನ್ನು ಈ ಬಾರಿ ಕೈಗೊಳ್ಳಲಾಗಿದೆ. ಜನವರಿ 26ರಂದು ರೈತರ ಟ್ರ್ಯಾಕ್ಟರ್ ಮೆರವಣಿಗೆಯ ವೇಳೆ ನಡೆದಂತಹ ಅನಾಹುತಕಾರಿ ಘಟನೆ ಮರುಕಳಿಸಬಾರದು ಎಂಬ ಕಾರಣಕ್ಕೆ, ಬೃಹತ್ ಕಂಟೈನರ್’ಗಳನ್ನು ಕೆಂಪು ಕೋಟೆಯ ಪ್ರವೇಶ ದ್ವಾರದ ಬಳಿ ಇಡಲಾಗಿದೆ. ಆಮಂತ್ರಿತ ಅತಿಥಿಗಳ ಹೊರತಾಗಿ ಬೇರೆ ಯಾರೂ ಸ್ವಾತಂತ್ರ್ಯ ದಿನಾಚರಣೆಯ ಸ್ಥಳ ಪ್ರವೇಶಿಸದಂತೆ ಈ ಕ್ರಮ ಕೈಗೊಳ್ಳಲಾಗಿದೆ.