ಕಲಬುರ್ಗಿ : ಜಿಲ್ಲೆಯಾದ್ಯಂತ ಮಳೆ ಆರ್ಭಟ ಹೆಚ್ಚಾಗಿದ್ದು, ಜನ-ಜೀವನ ಅಸ್ತವ್ಯಸ್ಥವಾಗಿದೆ. ಕಳೆದ ರಾತ್ರಿ 7 ಗಂಟೆಗೆ ಆರಂಭವಾದ ಮಳೆ ಎಡೆಬಿಡದೆ ಸುರಿಯುತ್ತಿದೆ. ನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಮನೆಗಳು ಜಲಾವೃತಗೊಂಡು ಜನರು ಪರದಾಡುತ್ತಿದ್ದಾರೆ.
ಸೇಡಂ ತಾಲೂಕಿನಲ್ಲಿ ಕಾಗಿಣಾ ನದಿ ಪ್ರವಾಹದಿಂದಾಗಿ ಮಳಖೇಡದ ಉತ್ತರಾದಿಮಠ ಸಂಪೂರ್ಣ ಜಲಾವೃತವಾಗಿದೆ. ಜಯತೀರ್ಥರು, ಅಕ್ಷೋಭ್ಯ ತೀರ್ಥರು ಮತ್ತು ರಘುನಾಥ ತೀರ್ಥರ ವೃಂದಾವನಗಳು ಮುಳುಗಡೆಯಾಗಿವೆ. ಮತ್ತಿತರ ಬಡಾವಣೆಗಳಿಗೆ ನದಿ ನೀರು ಹೊಕ್ಕು ಮನೆಯಲ್ಲಿದ್ದ ವಸ್ತುಗಳು ಎಲ್ಲ ನೀರು ಪಾಲಾಗಿವೆ.
ಚಿಂಚೋಳಿ ತಾಲೂಕಿನ ಬೆನಕನಹಳ್ಳಿ ಗ್ರಾಮ ಮಳೆ ನೀರಿನಿಂದ ಆವೃತವಾಗಿದೆ. ಕಾಳಗಿ ತಾಲೂಕಿನ ಹೆಬ್ಬಾಳ ಗ್ರಾಮ ಕೂಡ ಜಲಾವೃತವಾಗಿದೆ. ಇನ್ನು, ಕಲಬುರಗಿ ನಗರದ ಅನೇಕ ಬಡಾವಣೆಗಳು ಸಹ ಜಲಾವೃತವಾಗಿದೆ. ಪೂಜಾ ಕಾಲೋನಿ, ಓಂ ನಗರ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಮಳೆ ನೀರು ಮನೆಯೊಳಗೆ ನುಗ್ಗಿದ ಪರಿಣಾಮ ಜನರು ಕಂಗಾಲಾಗಿದ್ದಾರೆ.