ಎರಡು ತಲೆ ಹಾವಿಗಾಗಿ ಕೊಲೆ

ಎರಡು ತಲೆ ಹಾವಿಗಾಗಿ ಕೊಲೆ

ಕಲಬುರ್ಗಿ : ಎರಡು ತಲೆಯ ಹಾವಿಗಾಗಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಿದ್ದ ತಂದೆ ಮಗನನ್ನು ಬಂಧಿಸುವಲ್ಲಿ ಕಲಬುರ್ಗಿ ಜಿಲ್ಲೆ ಕಮಲಾಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಮಚಂದ್ರ ಚಿಲಾನೋರ ಮತ್ತು ಆತನ ಮಗ ಸೇರಿ ನವೆಂಬರ್ 4 ರಂದು ಸಿದ್ರಾಮಪ್ಪ ಸಾಸರವಗ್ಗೆ ಎಂಬಾತನನ್ನು ಕೊಲೆ ಮಾಡಿದ್ದರು. ಕೊಲೆಯಾದ ಸಿದ್ರಾಮಪ್ಪ ಪಟವಾದ ಗ್ರಾಮದ ಮುಲ್ಲಾಮಾರಿ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದ.

ಕಮಲಾಪುರ ತಾಲೂಕಿನ ಪಟವಾದ ಗ್ರಾಮದಲ್ಲಿ ಕೊಲೆಯಾಗಿದ್ದ ಸಿದ್ರಾಮಪ್ಪ ಸಾಸರವಗ್ಗೆ ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಕೊಡಂಬಲ ಗ್ರಾಮದ ನಿವಾಸಿಯಾಗಿದ್ದ. ಸಿದ್ಧರಾಮಪ್ಪ ಸಾಸರವಗ್ಗೆ ಹಾಗೂ ರಾಮಣ್ಣ ಚಿಲಾನೋರ ಸೇರಿ ಎರಡು ತಲೆಯ ಹಾವನ್ನು ಹಿಡಿದು ತಂದಿದ್ದರು.

ಸಿದ್ರಾಮಪ್ಪನಿಗೆ ತಿಳಿಯದ ಹಾಗೆ ಹಾವನ್ನು ಮಾರಾಟ ಮಾಡಿರುವ ವಿಚಾರನ್ನು ಸಿದ್ರಾಮಪ್ಪನ ಬಳಿ ರಾಮಣ್ಣ ಮುಚ್ಚಿಟ್ಟಿದ್ದ. ಹಾವು ಕೊಡೋದಕ್ಕೆ ಹಿಂದೇಟು ಹಾಕಿದ್ದ ರಾಮಣ್ಣನಿಗೆ ಅವಾಚ್ಯ ಶಬ್ದಗಳಿಂದ ಸಿದ್ರಾಮಪ್ಪ ಸಿಟ್ಟಿಗೆದ್ದ ರಾಮಣ್ಣನ ಮಗ ಭರತ್, ಸಿದ್ರಾಮಪ್ಪನ ಕತ್ತಿಗೆ ಚಾಕುವಿನಿಂದ ಇರಿದಿದ್ದ. ಈ ವೇಳೆ ಮಗನಿಗೆ ಸಾಥ್ ನೀಡಿದ್ದ ರಾಮಣ್ಣ, ಮಚ್ಚಿನಿಂದ ಸಿದ್ರಾಮಪ್ಪನಿಗೆ ಹಲ್ಲೆ ಮಾಡಿದ್ದ. ತೀವ್ರ ರಕ್ತಸ್ರಾವದಿಂದ ಸಿದ್ರಾಮಪ್ಪ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ.

ನಂತರ ಸಿದ್ರಾಮಪ್ಪನ ಶವವನ್ನು ಟಿವಿಎಸ್ ಬೈಕ್ ಮೇಲೆ ತಂದು ಪಟವಾದ ಹಳ್ಳದ ಸೇತುವೆ ಬಳಿ ಎಸೆದು ತಂದೆ ಮತ್ತು ಮಗ ಎಸ್ಕೇಪ್ ಆಗಿದ್ದರು. ನದಿಯಲ್ಲಿ ಶವ ತೇಲುತ್ತಿರುವುದು ಗಮನಕ್ಕೆ ಬಂದ ನಂತರ ಕಮಲಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.

ಮಗನನ್ನು ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Related