ಬೆಂಗಳೂರು: ಬಿಜೆಪಿಯ ಪ್ರಬಲ ನಾಯಕರ ಹಾಗು ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪದೇ-ಪದೇ ಹೇಳಿಕೆ ಕೊಡುತ್ತಲ್ಲೇ ಸುದ್ದಿಯಾಗುತ್ತಿದ್ದ ಯತ್ನಾಳ್, ಅರವಿಂದ್ ಬೆಲ್ಲದ್, ಸಿ.ಪಿ ಯೋಗೇಶ್ವರ್ಗೆ ಸಚಿವ ಸ್ಥಾನ ಕೈತಪ್ಪಿದ್ದು, ಮಾಧ್ಯಮದ ಮುಂದೆ ಅಚ್ಚರಿಯ ಹೇಳಿಕೆಕೊಟ್ಟಿದ್ದಾರೆ.
‘ಸಿ.ಎಂ ಹುದ್ದೆ ಅನ್ನೋದು ಮೈಸೂರು ದಸರದ ಅಂಬಾರಿ ಹೊರುವ ಆನೆ ಇದ್ದಂತೆ. ಅದೇನು ಖಾಯಂ ಅಲ್ಲ, ಬದಲಾವಣೆ ಜಗದ ನಿಯಮ ಒಂದಷ್ಟು ದಿನ, ಅರ್ಜುನ ಅಂಬಾರಿ ಹೊತ್ತರೆ ಮುಂದೆ ಭೀಮ, ಬಲರಾಮ ಹೊರುತ್ತವೆ. ದಸರ ಬರಲಿ ಯಾವ ಆನೆ ಸೂಕ್ತ ಎಂದು ತಿಳಿಯಲಿದೆ’ ಎಂದು ಸಿ.ಪಿ ಯೋಗೇಶ್ವರ್ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ.
ಬಿಜಾಪುರವನ್ನು ಸಂಪುಟದಲ್ಲಿ ಕಡೆಗಣಿಸಿದರೆ ಸಂಪುಟ ರಚನೆ ಮುಗಿದ ನಂತರ ಬಹಳ ದೊಡ್ಡ ಶಾಕ್ ಕೊಡ್ಬೇಕಾಗುತ್ತೆ ಎಂದು ಯತ್ನಾಳ್ ಈಗಾಗಲೇ ಹೇಳಿಕೆ ಕೊಟ್ಟಿದ್ದರು. ಆದರೀಗ ಹೈಕಮಾಂಡ್ ಶಾಕ್ ಕೊಟ್ಟಿದೆ. ಇತ್ತ ಕೊನೆಯವರೆಗೂ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಅರವಿಂದ್ ಬೆಲ್ಲದ್ ಸಂಪುಟ ರಚನೆಯ ನಂತರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.ಸಚಿವ ಸ್ಥಾನದ ಆಕಾಂಕ್ಷೆಯ ಪಟ್ಟಿಯಲ್ಲಿ ಕೊನೆಯವರೆಗೂ ಸತೀಶ್ ರೆಡ್ಡಿ ಹಾಗು ರಾಜುಗೌಡ ಹೆಸರೂ ಕೇಳಿ ಬಂದಿತ್ತು. ಆದರೆ ಕೈಗೆ ಬಂದ ತುತ್ತು ಬಾಯ್ಗೆ ಬರಲಿಲ್ಲ. ಈ ಎಲ್ಲಾ ಅತೃಪ್ತರು ಸರ್ಕಾರ ಉರುಳಿಸಲು ರೆಡಿಯಾಗಿದ್ದಾರಾ? ಕೆಲವೇ ತಿಂಗಳೊಳಗೆ ಸರ್ಕಾರ ಬದಲಾಗುತ್ತಾ? ಅಥವಾ ಬೊಮ್ಮಾಯಿ ಸಚಿವ ಸೈನ್ಯ ಬದಲಾಗುತ್ತಾ ಎಂಬ ಪ್ರಶ್ನೆ ಅತೃಪ್ತರ ಹೇಳಿಕೆಯಲ್ಲಿ ಪರೋಕ್ಷವಾಗಿ ಉದ್ಭವವಾಗಿದೆ.