ಮಂಡ್ಯ: ಕಳೆದ ವಾರ ತ್ರಿವರ್ಣ ಧ್ವಜ ಹಾರಿಸುವುದರ ಬದಲಾಗಿ ಹನುಮಧ್ವಜ ಹಾರಿಸಿ ಗ್ರಾಮದಲ್ಲಿ ಅಲ್ಲೋಲಕಲವಲ್ಲ ಸೃಷ್ಟಿಸಿದೆ ಗ್ರಾಮಸ್ಥರ ವಿರುದ್ಧ ಪೊಲೀಸರು ಲಾಟಿಚಾರ್ಜ್ ಮಾಡಿದ್ದರು. ಇದಾದ ಬಳಿಕ ಮತ್ತೆ ಇದೀಗ ಕೆರಗೋಡು ಗ್ರಾಮದಲ್ಲಿ ವಾತಾವರಣ ಬೂದಿ ಮುಚ್ಚಿದ ಕೆಂಡದಂತಾಗಿದೆ.
ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಗ್ರಾಮದಲ್ಲಿ ಪೊಲೀಸರು ಬಿಗಿ ಬಂದೋಬಸ್ ವ್ಯವಸ್ಥೆಯನ್ನು ಮಾಡಿದ್ದರು ಕೂಡ ಗ್ರಾಮಸ್ಥರೇ ಪೊಲೀಸರ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಗ್ರಾಮದಲ್ಲಿ ಉದ್ದೇಶ ಪೂರ್ವಕವಾಗಿ ಪೊಲೀಸರು ದೌರ್ಜನ್ಯ ನಡೆಸ್ತಿದ್ದಾರೆ ಅನ್ನೋದು ಗ್ರಾಮಸ್ಥರ ಸಿಟ್ಟು. ನಿಯಮ ಸಡಲಿಸಿ ಹನುಮ ಧ್ವಜ ಹಾರಿಸಲು ಬಿಡದಿದ್ದರೆ ಕೆರಗೋಡು ಗ್ರಾಮದ ಮನೆ ಮನೆಗಳ ಮೇಲೂ ಹನುಮಧ್ವಜ ಹಾರಿಸ್ತೀವಿ ಅಂತ ಸವಾಲ್ ಹಾಕಿದ್ದಾರೆ ಗ್ರಾಮಸ್ಥರು.
ಇನ್ನು ಕೆರಗೋಡು ಗ್ರಾಮಕ್ಕೆ ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಇಂದ್ರೇಶ್ ಬೆಂಬಲಿಗರ ಜೊತೆ ಬಂದರು. ಗ್ರಾಮಸ್ಥರಿಗೆ ನಾವಿದ್ದೀವಿ ಅಂತ ಬೇರೆ ಹುರಿದುಂಬಿಸಿದರು. ಜನನೂ ಪೊಲೀಸರಿಂದಲೇ ನಮಗೆ ಸಮಸ್ಯೆ ಆಗ್ತಿದೆ ಅಂತ ಗೋಳಾಡಿದರು. ಇಷ್ಟೆಲ್ಲದರ ಮಧ್ಯೆ ಮಂಡ್ಯ ಧ್ವಜ ವಿವಾದದ ಬಗ್ಗೆ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ. ಪಾಟೀಲ್ ಫಸ್ಟ್ ಟೈಂ ಮಾತಾಡಿದರು. ಬಿಜೆಪಿ ಮತ್ತು ಜೆಡಿಎಸ್ನ ಕುಮಾರಸ್ವಾಮಿ ಮೇಲೆ ಸಿಟ್ಟು ಸ್ಫೋಟವಾಯಿತು.
ಕೆರಗೋಡು ಕಲಹ, ಫೆ.7ಕ್ಕೆ ಮಂಡ್ಯ ಬಂದ್!
ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಇಳಿಸಿರುವುದನ್ನ ಖಂಡಿಸಿ ಫೆಬ್ರವರಿ 7ರಂದು ಮಂಡ್ಯ ಜಿಲ್ಲೆ ಬಂದ್ಗೆ ಕರೆ ನೀಡಲಾಗಿದೆ. ರಾಜಕೀಯ ಮುಖಂಡರ ಬಂದ್ಗೂ, ನಮಗೂ ಸಂಬಂಧ ಇಲ್ಲ. ಸ್ವಯಂಪ್ರೇರಿತವಾಗಿ ಜನರೇ ಬಂದ್ ಮಾಡಬೇಕು ಅಂತ ಸಮಾನ ಮನಸ್ಕರ ವೇದಿಕೆ ಮುಖಂಡ ನಾಗಣ್ಣಗೌಡ ಕರೆ ಕೊಟ್ಟಿದ್ದಾರೆ.