ಹಗರಿಬೊಮ್ಮನಹಳ್ಳಿ : ಪಟ್ಟಣದ ಜಿವಿಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಾಸಕ ಭೀಮನಾಯ್ಕ್ 2019-20ನೇ ಸಾಲಿನ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಭೀಮನಾಯ್ಕ್, ಬಡ ವಿದ್ಯಾರ್ಥಿಗಳ ಕಲಿಕೆ ಉತ್ತೇಜಿಸುವ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರ ಅಭಿವೃದ್ಧಿಪಡಿಸುವ ಉದ್ದೇಶದಿಂದ ಲ್ಯಾಪ್ಟಾಪ್ ವಿತರಿಸಲಾಗಿದ್ದು, ಹೊಸ ಹೊಸ ಸಂಶೋಧನೆ ಅವಿಷ್ಕಾರ ರೂಪಗೊಳ್ಳುವ ಇಂದಿನ ತಂತ್ರಜ್ಞಾನ ಯುಗದ ಮುಂದುವರೆದ ಪ್ರಪಂಚದಲ್ಲಿ ಕಂಪ್ಯೂಟರ್ ಜ್ಞಾನ ವಿದ್ಯಾರ್ಥಿಗಳಿಗೆ ಅತ್ಯವಶ್ಯಕ. ಲ್ಯಾಪ್ಟಾಪ್ ಎಂಬುದು ವಿದ್ಯಾರ್ಥಿಗಳ ಕಲಿಕೆಯ ಸಾಧನೋಪಕರಣವಾಗಿದ್ದು ವಿದ್ಯಾರ್ಥಿಗಳು ಕಲಿಕೆಯಲ್ಲಿ ಪ್ರಗತಿ ಸಾಧಿಸಲು ಸಹಾಯಕ. ವಿದ್ಯಾರ್ಥಿಗಳು ಲ್ಯಾಪ್ಟಾಪ್ನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವ ಮೂಲಕ ಕಲಿಕೆಯಲ್ಲಿ ಪ್ರಗತಿ ಸಾಧಿಸಿ ಎಂದರು.
ಕ್ಷೇತ್ರದಲ್ಲಿ ಶಿಕ್ಷಣ ಅಭಿವೃದ್ದಿಗಾಗಿ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದು ಶಾಲಾ ಕೊಠಡಿಗಳನ್ನು, ಅಂಗನವಾಡಿ ಕೇಂದ್ರಗಳನ್ನು, ಹಾಸ್ಟೆಲ್, ವಸತಿ ಶಾಲೆಗಳನ್ನು ನಿರ್ಮಿಸಿದ್ದು ಸ್ಮಾರ್ಟ್ಕ್ಲಾಸ್ಗಳನ್ನು ಅಳವಡಿಸುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಮಾಡಿರುವುದಾಗಿ ತಿಳಿಸಿದರು.