ಬಿಜೆಪಿಯಿಂದ ಗಾಂಧಿಜಿಗೆ ಅವಮಾನ: ಜಿ.ಪರಮೇಶ್ವರ

ಬಿಜೆಪಿಯಿಂದ ಗಾಂಧಿಜಿಗೆ ಅವಮಾನ: ಜಿ.ಪರಮೇಶ್ವರ

ತುಮಕೂರು : ಮಹಾತ್ಮ ಗಾಂಧಿ ಹೋರಾಟವನ್ನು ಹೀನಾಯವಾಗಿ ಜನರ ಮುಂದೆ ಬಿಂಬಿಸುವ ಮೂಲಕ ಬಿಜೆಪಿಯು ರಾಷ್ಟ್ರಪಿತ, ದೇಶದ ಜನರನ್ನು ಅಪಮಾನಿಸುತ್ತಿದೆ ಎಂದು ಶಾಸಕ ಡಾ.ಜಿ.ಪರಮೇಶ್ವರ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಹಾತ್ಮಗಾಂಧಿ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಾತ್ಮ ಗಾಂಧಿ ಅವರು ಸ್ವಾತಂತ್ರ‍್ಯ ಚಳವಳಿಯ ನೇತಾರರೇ ಆಗಿರಲಿಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತನಿಗೂ, ಗಾಂಧೀಜಿ ಹೋರಾಟಕ್ಕೂ ಯಾವುದೇ ವ್ಯತ್ಯಾಸವಿಲ್ಲ ಎಂದು ಹೇಳುವ ಮೂಲಕ ಇಡೀ ಸ್ವಾತಂತ್ರ‍್ಯ ಚಳವಳಿಯನ್ನೇ ಅಪಮಾನಿಸುತ್ತಿದೆ ಟೀಕಿಸಿದರು.

ಪ್ರಪಂಚವೇ ಮಹಾತ್ಮ ಗಾಂಧಿಯನ್ನು ಶಾಂತಿದೂತ ಎಂದು ಕರೆಯುತ್ತಿದೆ. ವಿಶ್ವದೆಲ್ಲೆಡೆ ಅವರ ಪ್ರತಿಮೆಗಳನ್ನು ಅನಾವರಣ ಮಾಡಿದ್ದಾರೆ. ವಿಶ್ವಸಂಸ್ಥೆಯೇ ಅವರು ಹುಟ್ಟಿದ ದಿನವನ್ನು ಶಾಂತಿಯ ದಿನವನ್ನಾಗಿ ಆಚರಿಸಲು ಕರೆ ನೀಡಿದೆ. ಇಷ್ಟಿದ್ದರೂ ಗಾಂಧೀಜಿ ತತ್ವಾದರ್ಶಗಳನ್ನು ಬಿಜೆಪಿ ಕಡೆಗಣಿಸಿದೆ. ಅಪಪ್ರಚಾರ ನಡೆಸುವ ಮೂಲಕ ಜನಮಾನಸದಲ್ಲಿ ಅವರ ಬಗ್ಗೆ ಕೆಟ್ಟ ಭಾವನೆ ಬರುವಂತೆ ಬಿಂಬಿಸಲು ಹೊರಟಿದೆ. ಇದಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.

ಮಹಾತ್ಮಗಾಂಧಿ 1921ರಲ್ಲಿ ಸ್ವಾತಂತ್ರ‍್ಯ ಚಳವಳಿಯ ನಾಯಕತ್ವ ವಹಿಸಿಕೊಂಡ ನಂತರ, ಹೋರಾಟದ ದಿಕ್ಕೇ ಬದಲಾಯಿತು. ಅವರು ಅನುಸರಿಸಿದ ಅಹಿಂಸೆಯ ಮಾರ್ಗ ವಿಶ್ವದಲ್ಲಿಯೇ ಮಹತ್ವ ಪಡೆದುಕೊಂಡಿತ್ತು. ಮುಂದಿನ ಒಂದು ತಿಂಗಳ ಕಾಲ ದೇಶದಾದ್ಯಂತ ಗಾಂಧೀಜಿ ಸ್ಮರಣಾರ್ಥ ವಿವಿಧ ಕಾರ್ಯಕ್ರಮಗಳನ್ನು ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದರು.

ಕಾಂಗ್ರೆಸ್ ಪಕ್ಷ ದೇಶದಲ್ಲಿ 54 ವರ್ಷಗಳ ಆಡಳಿತ ನಡೆಸಿ, ಪ್ರತಿಯೊಬ್ಬರು ಸಮಾನತೆಯಿಂದ ಬದುಕಲು, ಸ್ವಾವಲಂಬನೆಯ ಜೀವನ ನಡೆಸಲು ಅನುವು ಮಾಡಿಕೊಟ್ಟಿದೆ. ಮೇಲು, ಕೀಳು, ಬಡತನ, ಸಿರಿತನ ಎಲ್ಲವನ್ನು ಸಹಿಸಿಕೊಂಡು ಮುನ್ನಡೆಸಲಾಗಿದೆ. ಆದರೆ ಕೇವಲ ಏಳು ವರ್ಷದಲ್ಲಿ ದೇಶವನ್ನು ಮತ್ತೆ ಕಾರ್ಪೊರೇಟ್ ಕಂಪನಿಗಳ ದಾಸ್ಯಕ್ಕೆ ತೆಗೆದುಕೊಂಡು ಹೋಗುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಧರ್ಮ, ಜಾತಿ ಹೆಸರಿನಲ್ಲಿ ಸಂಘರ್ಷ ಹೆಚ್ಚಿಸಿದೆ. ಜನರು ನಿಮ್ಮನ್ನು ಕ್ಷಮಿಸುವುದಿಲ್ಲ. ಇದು ಬಹಳ ದಿನಗಳ ಕಾಲ ನಡೆಯುವುದಿಲ್ಲ ಎಂದು ಗುಡುಗಿದರು.

ಪಕ್ಷದ ಮುಖಂಡರಾದ ಎಸ್.ಷಪಿಅಹಮದ್, ಆರ್.ರಾಮಕೃಷ್ಣ, ಸುಮುಖ ಕೊಂಡವಾಡಿ, ಆಟೊ ರಾಜು, ಸಿಮೆಂಟ್ ಮಂಜುನಾಥ್, ಮಹಿಳಾ ಘಟಕದ ಗೀತಾ ರುದ್ರೇಶ್, ಸುಜಾತ, ಗೀತಮ್ಮ, ಸಂಜೀವ್ ಕುಮಾರ್, ಜಾರ್ಜ್, ನಟರಾಜು, ಪ್ರಕಾಶ್ ಇತರರು ಉಪಸ್ಥಿತರಿದ್ದರು.

Related