ಬೆಂಗಳೂರು : ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಸೋಂಕಿನ ಸಂಖ್ಯೆ ಹೆಚ್ಚಾದಂತೆ ಬೆಡ್ಗಳ ಕೊರತೆ ಎದುರಾಗಿದೆ. ಇದರ ಮಧ್ಯೆ ಕೊರೋನಾ ಸೋಂಕಿತರಿಗೆ ಸಂಚಾರಿ ಐಸಿಯು ಬಸ್ ಸಂಚಾರ ಕೆಎಸ್ಆರ್ಟಿಸಿಯಿಂದ ಆರಂಭಗೊಂಡಿದೆ.
ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ಇಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಕೋರೋನ ಸೋಂಕಿತರಿಗೆ ಅವಶ್ಯ ಇರುವಂತ ಐಸಿಯು ಆನ್ ವೀಲ್ಸ್ ಮತ್ತು ಆಕ್ಸಿಜನ್ ಆನ್ ವೀಲ್ಸ್ ಬಸ್ಸುಗಳನ್ನು ಲೋಕಾರ್ಪಣೆಗೊಳಿಸಿದರು.
ಸಂಚಾರಿ ಐಸಿಯು ಬೆಡ್ ವಿಶೇಷತೆ!
ಐದು ಐಸಿಯು ಬೆಡ್ ಹೊಂದಿರುವಂತ ಬಸ್ ಇದಾಗಿದೆ ರೋಗಿಗಳಿಗೆ ಬಿಪಿ, ಆಕ್ಸಿಜನ್ ಪ್ರಮಾಣ, ಇಸಿಜಿ ತಪಾಸಣೆ ಬಸ್ನಲ್ಲೇ ದೊರೆಯಲಿದೆ. ಐವಿ ವ್ಯವಸ್ಥೆಯುಳ್ಳ ಬಸ್ನಲ್ಲಿ, ವೆಂಟಿಲೇಟರ್ ಸೌಲಭ್ಯವಿದೆ. ಪ್ರತಿಯೊಂದು ಬೆಡ್ಗೂ ಆಕ್ಸಿಜನ್ ವ್ಯವಸ್ಥೆ ಇದೆ. ತುರ್ತು ಔಷಧಿ ಸೌಲಭ್ಯವಿದೆ. ತುರ್ತು ಸಂದರ್ಭದಲ್ಲಿ ಬಳಕೆಗಾಗಿ ಜನರೇಟ್ ವ್ಯವಸ್ಥೆ ಇದೆ.
ಈ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿರುವಂತ ಐಸಿಯು ಸಂಚಾರಿ ಕೆ ಎಸ್ ಆರ್ ಟಿ ಸಿ ಬಸ್ ಅನ್ನು ಸುಮಾರು 10 ಲಕ್ಷ ಖರ್ಚು ಮಾಡಿ, ಮಾಡಲಾಗಿದೆ. ಕೊರೋನಾ ಸೋಂಕಿತರಾಗಿ, ಐಸಿಯು ತುರ್ತು ಬೆಡ್ ಇರುವಂತವರಿಗೆ ಈ ಸಂಚಾರಿ ಬಸ್ನಲ್ಲಿಯೇ ಚಿಕಿತ್ಸೆ ನೀಡುವ ಮೂಲಕ, ಆಸ್ಪತ್ರೆಗೆ ಸೂಕ್ತ ಕಾಲದಲ್ಲಿ ತಲುಪಿಸಿ, ಚಿಕಿತ್ಸೆ ನೀಡಲು ಅನುಕೂಲ ಮಾಡಿಕೊಡಲಾಗಿದೆ.
ಈ ಸಂದರ್ಭದಲ್ಲಿ ಸಚಿವ ಎಸ್.ಟಿ ಸೋಮಶೇಖರ್, ಶಾಸಕ ಚಂದ್ರಪ್ಪ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶಿವಯೋಗಿ ಕಳಸದ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.