ಶಿವಮೊಗ್ಗ : ಹೊಸನಗರ ತಾಲೂಕಿನ ರಿಪ್ಪನ್ಪೇಟೆ ಸಮೀಪದ ಹೆದ್ದಾರಿ ಪುರ ಗ್ರಾಪಂ ವ್ಯಾಪ್ತಿಯ ಯಡಗುಡ್ಡೆ ಗ್ರಾಮದಲ್ಲಿ ಕ್ಯಾನ್ಸರ್ನಿಂದ ಮೃತಪಟ್ಟ ತಾಯಿಯ ಅಂತ್ಯಸಂಸ್ಕಾರಕ್ಕಾಗಿ ಜಾಗ ಕೊಡುವಂತೆ ತಂದೆ ಬಳಿ ಮಗ ಗೋಗರೆಯುತ್ತ ರಾತ್ರಿಯಿಡೀ ಮನೆ ಬಾಗಿಲಲ್ಲೇ ಅಮ್ಮನ ಶವ ಇಟ್ಟುಕೊಂಡು ಕಣ್ಣೀರಿಟ್ಟ ಹೃದಯವಿದ್ರಾವಕ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.
ಯಡಗುಡ್ಡೆ ಗ್ರಾಮದ ನಾಗರಾಜ್ ಅವರ ಮೊದಲ ಪತ್ನಿ ನಾಗರತ್ನ(50) ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೆ ಶುಕ್ರವಾರ ಮೃತಪಟ್ಟಿದ್ದರು. ಪತಿ ನಾಗರಾಜ್, ಪತ್ನಿಯ ಅಂತ್ಯಕ್ರಿಯೆಗೆ ಜಾಗ ಕೊಡಲ್ಲ ಎಂದು ಪಟ್ಟು ಹಿಡಿದರು.
ರಾತ್ರಿಯಿಡೀ ಮನೆ ಮುಂದೆ ಶವ ಇಟ್ಟುಕೊಂಡು ಮಗ ಕುಳಿತರೂ ತಂದೆಯ ಮನಸ್ಸಿ ಕರಗಲಿಲ್ಲ. ವಿಷಯ ತಿಳಿಯುತ್ತಿದ್ದ ಸ್ಥಳಕ್ಕೆ ರಿಪ್ಪನ್ಪೇಟೆ ಠಾಣೆಯ ಪೊಲೀಸರು ಭೇಟಿ ನೀಡಿ ಮನವೊಲಿಸಿದರೂ ನಾಗರಾಜ್ ಒಪ್ಪಲಿಲ್ಲ. ಶನಿವಾರ ಮಧ್ಯಾಹ್ನ 12ಗಂಟೆಯಾದರೂ ಶವ ಸಂಸ್ಕಾರಕ್ಕೆ ಅವಕಾಶ ಸಿಕ್ಕಿರಲಿಲ್ಲ. ರಾಜಿ ಪಂಚಾಯಿತಿ ನಡೆಯುತ್ತಲೇ ಇತ್ತು.