ಹೊಸಕೋಟೆ : ನೀರು ಬರಬೇಕಿದ್ದ ಕೊಳವೆ ಬಾವಿಯಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿದೆ. ಅಪ್ಪಿತಪ್ಪಿ ಈ ನೀರನ್ನೇನಾದರೂ ಕೃಷಿಗೆ ಬಳಸಿದರೆ ಸುಟ್ಟುಹೋಗುತ್ತದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ದೇವನಗುಂಡಿ ಗ್ರಾಮದ ರೈತರ ಕೊಳವೆ ಬಾವಿಗಳಲ್ಲಿ ವಿಪರೀತವಾಗಿ ಕಾಡುತ್ತಿದೆ. ವಿಷಪೂರಿತ ನೀರಿನಿಂದಾಗುತ್ತಿರುವ ತೊಂದರೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಬಳಿ ರೈತರು ಅಳಲು ತೋಡಿಕೊಂಡಿದ್ದರೂ ಪರಿಹಾರ ಸಿಕ್ಕಿಲ್ಲ.
ದೇವನಗುಂಡಿ ಬಳಿ ಆಯಿಲ್ ಕಂಪನಿಗಳಿದ್ದು, ಅಲ್ಲಿನ ತ್ಯಾಜ್ಯ ವಸ್ತುಗಳು ಮಳೆಗಾಲದಲ್ಲಿ ಸಮೀಪದ ಬಾವಿಗಳಿಗೆ ಹರಿದು ಬರುತ್ತಿತ್ತು. ಪರಿಣಾಮ ಪಕ್ಕದಲ್ಲಿರುವ ರೈತರ ಜಮೀನುಗಳ ಕೊಳವೆಬಾವಿಯಲ್ಲಿ ಅನಿಲ ಮಿಶ್ರಿತ ನೀರು ಬರುತ್ತಿದ್ದು, ಬೆಂಕಿ ಹೊತ್ತಿಕೊಳ್ಳುತ್ತಿದೆ ಎಂಬ ಆರೋಪ ರೈತರದ್ದು.
ಆಯಿಲ್ ಕಂಪನಿಗಳು ನಿರುಪಯುಕ್ತ ಕೊಳವೆಬಾವಿಗಳಿಗೆ ಹರಿಸುತ್ತಿರುವ ತ್ಯಾಜ್ಯ ವಸ್ತುಗಳು ಅಂತರ್ಜಲ ಸೇರುತ್ತಿದ್ದು, ನೀರು ವಿಷಕಾರಿಯಾಗುತ್ತಿದೆ. ಅಕ್ಕಪಕ್ಕದ ಕೊಳವೆಬಾವಿಗಳಲ್ಲೂ ಅನಿಲ ಮಿಶ್ರಿತ ನೀರು ಬರುತ್ತಿದ್ದು, ಕೃಷಿ ಮಾಡಲು ಆಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ ರೋಗದ ಭೀತಿಯೂ ಕಾಡುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ರೈತರು ಆಕ್ರೋಶ ಹೊರ ಹಾಕಿದ್ದಾರೆ.