ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ಮಾಪಕ ಎಂ.ಪಿ ಶಂಕರ್ ಅವರ ಪತ್ನಿ ನಿಧನ

  • In Crime
  • May 10, 2022
  • 259 Views

ಮೈಸೂರು: ಮೇ,10 ಕನ್ನಡ ಚಿತ್ರರಂಗದ ಖ್ಯಾತ ನಟ, ಚಿರಸ್ಮರಣೀಯ ಕಲಾವಿದ, ನಿರ್ಮಾಪಕ ಎಂ.ಪಿ ಶಂಕರ್  ಅವರ ಮಡದಿ ಮಂಜುಳಾ ಶಂಕರ್ (75) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮಂಜುಳ ಶಂಕರ್ ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮೈಸೂರಿನ ವಿಜಯನಗರದಲ್ಲಿರುವ ನಿವಾಸಿಯಾಗಿದ್ದ ಇವರಿಗೆ ಸ್ವಲ್ಪ ದಿನಗಳ ಹಿಂದೆ ಹೃದಯಾಘಾತ ಸಂಭವಿಸಿತ್ತು. ಆ ವೇಳೆ ಅಂಜಿಯೋಗ್ರಾಮ್ ಮಾಡಿಸಲಾಗಿತ್ತು. ನಂತರ  ಬೈಪಾಸ್ ಸರ್ಜರಿಯನ್ನೂ ಮಾಡಲಾಗಿತ್ತು ಎಂಬ ಮಾಹಿತಿ ತಿಳಿದು ಬಂದಿದೆ.


ಮಂಜುಳ ಶಂಕರ್ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನವೇ  ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಎಂ.ಪಿ ಶಂಕರ್ ಕನ್ನಡ ಚಿತ್ರರಂಗದ ದಿಗ್ಗಜರಲ್ಲಿ ಒಬ್ಬರು. ಇವರು ಅನೇಕ ಖಳನಾಯಕ ಪಾತ್ರಗಳಲ್ಲಿ ನಟಿಸಿದ್ದಾರೆ. ಸತ್ಯ ಹರಿಶ್ಚಂದ್ರ, ಶನಿಪ್ರಭಾವ, ಬಂಗಾರದ ಮನುಷ್ಯ, ಗಂಧದ ಗುಡಿ, ಭೂತಯ್ಯನ ಮಗ ಅಯ್ಯ ಮುಂತಾದ ಕೆಲವು ಪ್ರಮುಖ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದರು. ಎಂ.ಪಿ.ಶಂಕರ್, ಶ್ರೇಷ್ಠ ಖಳನಾಯಕನೆಂದು ಹೆಸರುಮಾಡಿದ್ದರು. ಸತ್ಯ ಹರಿಶ್ಚಂದ್ರ ಚಿತ್ರದ `ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ..’ ಹಾಡಿನ ಮನೋಜ್ಞ ಅಭಿನಯಕ್ಕಾಗಿ ನೆನಪಾಗುವ ಎಂ.ಪಿ. ಶಂಕರ್, ಡಾ. ರಾಜ್, ನರಸಿಂಹರಾಜು, ದ್ವಾರಕೀಶ್, ವಿಷ್ಣುವರ್ಧನ್, ಕನ್ನಡ ಚಿತ್ರರಂಗದ ಅಗ್ರಜರೊಂದಿಗೆ ಆತ್ಮೀಯ ಒಡನಾಟ ಹೊಂದಿದವರಾಗಿದ್ದರು. ಇನ್ನು ಎಂ.ಪಿ ಶಂಕರ್ 2008ರಲ್ಲಿ ನಿಧನರಾಗಿದ್ದು ಅವರ ಕಲಾಸೇವೆ ಇಂದಿಗೂ ಚಿರಸ್ಮರಣೀಯವಾಗಿದೆ.

Related