ಬೆಂಗಳೂರು : ನಟ ದರ್ಶನ್ ವಿರುದ್ಧ ಗಂಭೀರ ಆರೋಪಗಳ ಕೇಳಿಬರುತ್ತಿರುವ ಬೆನ್ನಲ್ಲೇ ಇಂದ್ರಜಿತ್ ಲಂಕೇಶ್ ಮತ್ತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಭೇಟಿ ಆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅಭಿಮಾನಿಗಳು ಹರಿಬಿಟ್ಟಿದ್ದು, ದರ್ಶನ್ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಳ್ಳುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ.
ಇಂದ್ರಜಿತ್ ಲಂಕೇಶ್ ಅವರು ಈ ಹಿಂದೆ ಮಂಡ್ಯ ಸಂಸದೆ ಸುಮಲತಾ ಅವರನ್ನು ಟೀಕೆ ಮಾಡಿದ್ದರು. ಎಲ್ಲಿದ್ದೀಯಾ ಸುಮಲತಾ ಕೊರೋನಾ ಸಮಯದಲ್ಲಿ ಜನರ ಜತೆ ಇರೋದು ಬಿಟ್ಟು ಎಲ್ಲಿ ಹೋಗಿದ್ದೀಯಾ? ಕೊರೋನಾ ಸಮಯದಲ್ಲಿ ಮಂಡ್ಯ ಸ್ವಾಭಿಮಾನಿ ಜನ ಮರೆತುಹೋದರಾ? ಎಂದು ಇಂದ್ರಜಿತ್ ಟೀಕೆ ಮಾಡಿದ್ದರು.
ದರ್ಶನ್ ಹೆಸರಲ್ಲಿ ವಂಚನೆ ಯತ್ನ ಪ್ರಕರಣ ಯಾವುದೇ ತಾರ್ಕಿಕ ಅಂತ್ಯ ಕಾಣದೇ ರಾಜಿ-ಸಂಧಾನ ಮಾಡಿಕೊಂಡ ಬೆನ್ನಲ್ಲೇ ಪ್ರತ್ಯಕ್ಷರಾದ ಇಂದ್ರಜಿತ್ ಲಂಕೇಶ್, ನಟ ದರ್ಶನ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ವಂಚನೆ ಯತ್ನ ಪ್ರಕರಣದಲ್ಲಿ ಕೇಳಿಬಂದಿರುವ ಅರುಣಾ ಕುಮಾರಿಗೆ ದರ್ಶನ್ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೆ, ಸಂದೇಶ್ ನಾಗರಾಜ್ ಒಡೆತನದ ಹೋಟೆಲ್ನಲ್ಲಿ ಸಪ್ಲೆಯರ್ ಮೇಲೆ ಹಲ್ಲೆ ಮಾಡಿದ್ದಾರೆಂಬ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಮೈಸೂರು ಪೊಲೀಸ್ ಠಾಣೆಗಳು ಸೆಟಲ್ಮೆಂಟ್ ಅಡ್ಡೆಗಳಾಗುತ್ತಿವೆ. ಓರ್ವ ಸೆಲೆಬ್ರಿಟಿಯಾಗಿ ಠಾಣೆಯ ಮುಂದೆಯೇ ತಲೆ ಕಡಿಯುತ್ತೇನೆ ಎನ್ನುವುದು ಸರಿಯಲ್ಲ. ತನಿಖೆ ನಡೆದರೆ ಸತ್ಯಾಸತ್ಯತೆ ಹೊರಬೀಳಲಿದೆ ಎಂದು ಲಂಕೇಶ್ ಹಲವು ಗಂಭೀರ ವಿಚಾರಗಳನ್ನು ಕೆದಕಿ ದರ್ಶನ್ರನ್ನು ಇದೀಗ ಆರೋಪಿ ಸ್ಥಾನದಲ್ಲಿ ಇರಿಸಿದ್ದಾರೆ.