ಕಲಬುರಗಿ : ಸೇಡಂ ತಾಲ್ಲೂಕಿನ ಮಳಖೇಡ ಬಳಿಯ ಕಾಗಿಣಾ ನದಿಯ ಪ್ರವಾಹಕ್ಕೆ ಮೀನುಗಾರರ ಗುಡಿಸಲುಗಳು ಕೊಚ್ಚಿಹೋಗಿದ್ದು, 10ಕ್ಕೂ ಹೆಚ್ಚು ಕುಟುಂಬಗಳು ಬೀದಿ ಪಾಲಾಗಿವೆ.
ನದಿ ತಟದಲ್ಲಿ ಈ ಕುಟುಂಬಗಳು ಸುಮಾರು 20 ವರ್ಷಗಳಿಂದ ವಾಸವಿದ್ದವು. ಪ್ರವಾಹದಿಂದಾಗಿ ಮನೆಯ ದಿನಸಿ, ಮೀನಿನ ಬಲೆ ಸೇರಿ ಅಗತ್ಯ ವಸ್ತುಗಳು ನೀರುಪಾಲಾಗಿದೆ.
ಮೀನು ಹಿಡಿದು ಜೀವನ ಸಾಗಿಸುತ್ತಿದ್ದ ಕುಟುಂಬಗಳು ಬೀದಿಗೆ ಬಿದ್ದಿವೆ. ಆಶ್ರಯವಿಲ್ಲದೆ ಬಸ್ ನಿಲ್ದಾಣ, ದೇವಸ್ಥಾನಗಳಲ್ಲಿ, ರಸ್ತೆ ಪಕ್ಕದಲ್ಲಿ, ಖಾಲಿ ಜಾಗದಲ್ಲಿ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಪ್ರತಿ ಭಾರೀ ಪ್ರವಾಹ ಬಂದಾಗಲೂ ಇದೇ ರೀತಿ ಆಗುತ್ತಿದ್ದು, ಶಾಶ್ವತ ಸೂರು ಕಲ್ಪಿಸುವಂತೆ ನಿರಾಶ್ರಿತ ಮೀನುಗಾರರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.