ದಲಿತ ಸಾಹಿತ್ಯ ಅಧ್ಯಯನ ಗ್ರಂಥ ಪ್ರಕಟ: ಎಂ ಬಿ ಪಾಟೀಲ

ದಲಿತ ಸಾಹಿತ್ಯ ಅಧ್ಯಯನ ಗ್ರಂಥ ಪ್ರಕಟ: ಎಂ ಬಿ ಪಾಟೀಲ

ವಿಜಯಪುರ: ವಚನ ಪಿತಾಮಹ ಡಾ. ಪ. ಗು. ಹಳಕಟ್ಟಿ ಸಂಶೋಧನಾ ಕೇಂದ್ರದಿಂದ ದಲಿತ ಸಾಹಿತ್ಯ ಅಧ್ಯಯನ ಗ್ರಂಥ ಪ್ರಕಟಿಸಲಾಗುವುದು‌ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.

ನಗರದಲ್ಲಿ ಗದುಗಿನ ದಲಿತ ಸಾಹಿತ್ಯ ಪರಿಷತ್ತಿನ‌ ಬೆಳ್ಳಿ‌ ಹಬ್ಬದ ಸಣ್ಣ ಸಂಭ್ರಮ ಮತ್ತು 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಹಳಕಟ್ಟಿ ಸಂಶೋಧನೆ ಕೇಂದ್ರದಿಂದ ಈಗಾಗಲೇ ಹಳಕಟ್ಟಿ, ಕಾಕಾ ಕಾರ್ಖಾನೀಸ್, ಅಮೋಘಸಿದ್ಧರು, ಆದಿಲ್ ಶಾಹಿ ಡಾ. ಎಂ. ಎಂ. ಕಲಬುರ್ಗಿ, ಕಾಕಾ ಕಾರ್ಖಾನೀಸ ಮುಂತಾದವರ ಕುರಿತು ಗ್ರಂಥಗಳನ್ನು ಪ್ರಕಟಿಸಲಾಗಿದೆ‌. ದಾಸ ಸಾಹಿತ್ಯ ಪ್ರಕಟಣೆ ಕೆಲಸ ಪ್ರಗತಿಯಲ್ಲಿದೆ. ಇನ್ನು ಮುಂದೆ ದಲಿತ ಸಾಹಿತ್ಯ ಅಧ್ಯಯನ ಗ್ರಂಥ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು.

ಸಮುದಾಯದ ನೋವು ಮತ್ತು ನಲಿವಿನ ಭಾವನೆಗಳನ್ನು ದಲಿತ ಸಾಹಿತ್ಯ ಒಳಗೊಂಡಿರುವ ಅರ್ಥಪೂರ್ಣ ಮತ್ತು ಹೃದಯದಿಂದ ಬಂದಿರುವ ನೈಜ ಮತ್ತು ಶ್ರೇಷ್ಠ ಸಾಹಿತ್ಯ ಇದಾಗಿದೆ ಎಂದು ಅವರು ಹೇಳಿದರು.

ಬೌದ್ಧರು, ಬಸವಾದಿ ಶರಣರ ಸಮಸಮಾಜ‌ ನಿರ್ಮಾಣವಾಗಬೇಕು. ಈ ಮೂಲಕ ಜಾತಿ ಪದ್ಧತಿ‌ ತೊಲಗಿಸಬೇಕು. ಬಸವ ಧರ್ಮ ಜಾತಿ‌ ರಹಿತ ಧರ್ಮವಾಗಿದೆ. ಬಸವಾದಿ‌ ಶರಣರ ಸಿದ್ಧಾಂತ, ಅನುಭವ ಮಂಟಪದ ಸಾರವನ್ನು ಅಂಬೇಡ್ಕರ ಅವರು ಸಂವಿಧಾನದಲ್ಲಿ ನಮಗೆ ನೀಡಿದ್ದಾರೆ. ಬಸವಣ್ಣ ಮತ್ತು ಅಂಬೇಡ್ಕರ್ ಅವರು ಎರಡು ಕಣ್ಣುಗಳಿದ್ದಂತೆ ಎಂದು ಸಚಿವರು‌ ತಿಳಿಸಿದರು.

ಬಸವ, ಅಂಬೇಡ್ಕರ್ ಬಯಸಿದ ಸಮಾಜ‌ ನಿರ್ಮಾಣ ವಾಗದೇ ಪ್ರಬುದ್ಧ ಭಾರತ ಆಗಲು‌ ಸಾಧ್ಯವಿಲ್ಲ.  ಪ್ರಬುದ್ಧ ಭಾರತ ನಿರ್ಮಾಣ ಅಗತ್ಯವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ.  ದಲಿತ ಸಾಹಿತ್ಯ ಪರಿಷತ್ತು ಆರಂಭವಾಗಿ 25ನೇ ವರ್ಷಾಗಳಾಗಿವೆ. ಆದರೆ, ಸಮಾಜದಲ್ಲಿ ಇನ್ನೂ ಗಣನೀಯ ಬದಲಾವಣೆಯಾಗಿಲ್ಲ ಎಂದು ಅವರು ಹೇಳಿದರು.

ಹಳಕಟ್ಟಿ ಸಂಶೋಧನಾ ಕೇಂದ್ರ ಆರಂಭಿಸಿದ ನಂತರ ನಾನು ಹೆಚ್ಚಾಗಿ ಸಾಹಿತ್ಯ ಚಟುವಟಿಕಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಅವರು, ಸಿಎಂ‌ ಭೇಟಿಯಾಗಿ ದಲಿತ ಸಾಹಿತ್ಯ ಪರಿಷತ್ತಿಗೆ ನೀಡಬೇಕಿರುವ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಇದೇ ವೇಳೆ ಭರವಸೆ ನೀಡಿದರು.

ಇದಕ್ಕೂ‌ ಮುಂಚೆ ಸಚಿವರು ಬುದ್ಧ, ಬಸವ ಮತ್ತು ಅಂಬೇಡ್ಕರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲುಸಿದರು.  ಅಲ್ಲದೇ, ರಮಾ ಸಾಹೇಬಾ ಕಿರುಚಿತ್ರ ಹಾಗೂ ಪರಿಷತ್ತಿನ ಗ್ರಂಥಗಳನ್ನು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ನಾಗಠಾಣ ಶಾಸಕ ವಿಠ್ಠಲ‌ ಧೋಂಡಿಬಾ ಕಟಕದೊಂಡ, ಜಮಖಂಡಿ ಶಾಸಕ‌ ಜಗದೀಶ ಗುಡಗುಂಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ವಿಧಾನ ಪರಿಷತ ಮಾಜಿ ಸದಸ್ಯ ಡಿ. ಎಸ್. ವೀರಯ್ಯ, ಸಮ್ಮೇಳನದ ಸರ್ವಾಧ್ಯಕ್ಷ ಎಚ್. ಟಿ. ಪೋತೆ, ಪರಿಷತ್ತಿನ ಅಧ್ಯಕ್ಷ ಅರ್ಜುನ ಗೊಳಸಂಗಿ, ಬುದ್ಧವಿಹಾರದ ಸಂಘಪಾಲ ಬಂತೇಜಿ, ಮಲ್ಲೆಪುರಂ ಜಿ. ವೆಂಕಟೇಶ, ವೈ. ಎಂ. ಭಜಂತ್ರಿ, ಎಚ್. ಡಿ. ಕೋಲಕಾರ, ಡಿಎಸ್ಎಸ್ ಮುಖಂಡ ಡಿ. ಜಿ. ಸಾಗರ, ಅಲ್ಲಾಗಿರಿರಾಜ, ತುಕಾರಾಮ ಚಂಚಲಕರ, ಶ್ರೀನಾಥ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

Related