ಬಳ್ಳಾರಿ: ಕಂಪ್ಲಿ ತಾಲ್ಲೂಕಿನ ಅರಳಿಹಳ್ಳಿ ತಾಂಡಾದಲ್ಲಿ ನಡೆಯುತ್ತಿದ್ದ ಮೂರು ಅಪ್ರಾಪ್ತ ಬಾಲಕಿಯರ ಬಾಲ್ಯವಿವಾಹವನ್ನು ಅಧಿಕಾರಿಗಳು ಮಧ್ಯಪ್ರವೇಶಿಸಿ ತಡೆದಿದ್ದಾರೆ.
ಹೊಸಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಮರೇಶ ಅವರ ನೇತೃತ್ವದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಂಡವು ಪೊಲೀಸ್ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಮದುವೆಗೆ ಬ್ರೇಕ್ ಬಿದ್ದಿದೆ.
ಮಕ್ಕಳ ಸಹಾಯವಾಣಿ(1098)ಗೆ ಬಂದ ಮಾಹಿತಿ ಅನುಸಾರ ಕಾರ್ಯಪ್ರವೃತ್ತರಾದ ಸಿ.ಡಿ.ಪಿ.ಒ.ಅಮರೇಶ ಅವರು ಈ ಗ್ರಾಮಕ್ಕೆ ಭೇಟಿ ನೀಡಿ ಪೋಷಕರಿಗೆ ಕಾನೂನು ತಿಳಿವಳಿಕೆ ನೋಟಿಸ್ ನೀಡಿ, ಅವರಿಂದ ಮುಚ್ಚಳಿಕೆ ಬರೆಸಿಕೊಂಡರು.
ಈ ಸಂದರ್ಭದಲ್ಲಿ ಸಿಡಿಪಿಒ ಅಮರೇಶ ಅವರು ಬಾಲ್ಯವಿವಾಹದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿಕೊಟ್ಟರು. ಮಕ್ಕಳ ಸಹಾಯವಾಣಿ ಸಂಯೋಜಕ ಚಿದಾನಂದ, ಪೊಲೀಸ್ ಇಲಾಖೆಯ ನಾಗನಗೌಡ ಸೇರಿದಂತೆ ಅನೇಕರು ಇದ್ದರು.