ಮುಖ್ಯಮಂತ್ರಿ ಕುರ್ಚಿ ಸುಖದ ಸುಪ್ಪತ್ತಿಗೆ ಅಲ್ಲ: ಸಿಎಂ

ಮುಖ್ಯಮಂತ್ರಿ ಕುರ್ಚಿ ಸುಖದ ಸುಪ್ಪತ್ತಿಗೆ ಅಲ್ಲ: ಸಿಎಂ

ಮೈಸೂರು: ಭ್ರಷ್ಟಚಾರ, ದುರಾಡಳಿತ, ಅಭಿವೃದ್ಧಿಹೀನ ಮತ್ತು ಸಮಾಜವನ್ನು ಒಡೆಯುವ ದುಷ್ಟ ರಾಜಕಾರಣವನ್ನು ರಾಜ್ಯದ ಜನತೆ ಸೋಲಿಸಿ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ವರುಣ ವಿಧಾನಸಭಾ ಕ್ಷೇತ್ರದ ಸುತ್ತೂರಿನಲ್ಲಿ ನಡೆದ ಬೃಹತ್ ಕೃತಜ್ಞತಾ ಸಮರ್ಪಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

“ಇದು ನನ್ನ ಕೊನೆ ಚುನಾವಣೆ. ಆದರೆ ನಾನು ಉಸಿರು ಇರುವವರೆಗೂ ಸಕ್ರಿಯ ರಾಜಕಾರಣದಲ್ಲಿದ್ದು ಜನರ ಸೇವೆಯನ್ನು ಮುಂದುವರೆಸುತ್ತೇನೆ. 2013 ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ನುಡಿದಂತೆ ನಡೆದು ಸಮಾಜದ ಎಲ್ಲಾ ಜಾತಿ, ಧರ್ಮ ಮತ್ತು ಎಲ್ಲಾ ವರ್ಗಗಳ ಪರವಾಗಿ ಕಲ್ಯಾಣ ಕಾರ್ಯಕ್ರಮ ರೂಪಿಸಿದ್ದೆ. ಈ ಬಾರಿ ಇನ್ನಷ್ಟು ಪರಿಣಾಮಕಾರಿಯಾದ ಕಲ್ಯಾಣ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ನಾಡಿಗೆ ನೀಡಲಿದೆ. ಬಸವಾದಿ ಶರಣರು ನುಡಿದಂತೆ ನಡೆದಿದ್ದರು. ಅದನ್ನೇ ನಾನು ಮಾದರಿಯನ್ನಾಗಿ ಇಟ್ಟುಕೊಂಡು ನಾನು ಮೊದಲ ಬಾರಿ ಬಸವ ಜಯಂತಿ ದಿನವೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ನುಡಿದಂತೆ ನಡೆದೆ ಎಂದರು.

ಮುಖ್ಯಮಂತ್ರಿ ಕುರ್ಚಿ ಸುಖದ ಸುಪ್ಪತ್ತಿಗೆ ಅಲ್ಲ. ಜನರ ಬದುಕನ್ನು ಸುಧಾರಿಸಲು ಸಿಗುವ ಅವಕಾಶ. ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ ಗ್ಯಾರಂಟಿಗಳು ಜಾರಿ ಆಗುವುದಿಲ್ಲ. ರಾಜ್ಯ ದಿವಾಳಿಯಾಗುತ್ತದೆ ಎಂದಿದ್ದರು. ನಾವು ಈಗ ಐದನ್ನೂ ಜಾರಿ ಮಾಡಿದ್ದೇವೆ. ಕಾಂಗ್ರೆಸ್ ಘೋಷಿಸಿದ ಬಡವರ-ಮಧ್ಯಮ ವರ್ಗದವರ ಪರವಾದ ಯೋಜನೆ ಘೋಷಿಸಿದಾಗ ಪ್ರಧಾನ ಮಂತ್ರಿ ಮೋದಿಯವರು ಜನರಿಗೆ ಅನುಕೂಲ ಮಾಡುವ ನಮ್ಮ ಯೋಜನೆಗೆ ತಮ್ಮ ಸಹಕಾರ ನೀಡಬೇಕಿತ್ತು. ಆದರೆ ಮೋದಿ ಅವರಿಗೆ ಬಡವರ-ಮಧ್ಯಮ ವರ್ಗದವರ ಪ್ರಗತಿ, ಅಭಿವೃದ್ಧಿ ಬೇಕಾಗಿಲ್ಲ. ಅದಕ್ಕೇ ಬಿಜೆಪಿಯವರು ಜನರಲ್ಲಿ ತಮ್ಮ ಸಂಪ್ರದಾಯದಂತೆ ಸುಳ್ಳುಗಳನ್ನು ಎರಚಾಡುತ್ತಾ ಗೊಂದಲ ಸೃಷ್ಟಿಸುತ್ತಿದ್ದಾರೆ. ಜನರಿಗೆ ಅನುಕೂಲ ಆಗುವುದು ಅವರಿಗೆ ಬೇಕಾಗಿಲ್ಲ ಎಂದು ಟೀಕಿಸಿದರು.

 

Related