ಪೀಠಾಧಿಪತಿ ಮೇಲೆ ಜಾತಿನಿಂದನೆ ಪ್ರಕರಣ ದಾಖಲು

ಪೀಠಾಧಿಪತಿ ಮೇಲೆ ಜಾತಿನಿಂದನೆ ಪ್ರಕರಣ ದಾಖಲು

ಯಾದಗಿರಿ : ತಾಲೂಕಿನ ಹೆಡಗಿಮುದ್ರಾ ಗ್ರಾಮದ ಶಾಂತಶಿವಯೋಗಿ ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮಿಜಿಗಳ ಮೇಲೆ ಜಾತಿನಿಂದನೆ ಹಾಗೂ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ.

ಮಠಕ್ಕೆ ದರ್ಶನ ಪಡೆಯಲು ಬಂದಂತಹ ಇಬ್ಬರಿಗೆ ಬೈದು ಜಾತಿನಿಂದನೆ ಮಾಡಿ, ಸಾಯಿಸುತ್ತೇನೆ ಎಂದು ಹೇಳಿದ್ದಾರೆ ಎಂಬುದಾಗಿ ಆರೋಪಿಸಿ ಯಾದಗಿರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮೊದಲಿಂದಲೂ ಅಪಾರ ಭಕ್ತ ಸಮೂಹವನ್ನು ಮಠವು ಹೊಂದಿದೆ. ಈ ಪ್ರಕರಣ ಭಕ್ತರಿಗೆ ಬಹಳ ಆಘಾತ ಉಂಟು ಮಾಡಿದ್ದು, ಭಕ್ತರ ನಡೆ ಏನು ಎಂಬುದು ತಿಳಿಯದಾಗಿದೆ.

ಈ ಕುರಿತು ಮಠದಿಂದ ಯಾವುದೇ ಹೇಳಿಕೆಗಳು ವ್ಯಕ್ತವಾಗಿಲ್ಲ. ಮುಂಜಾಗ್ರತೆ ಕ್ರಮವಾಗಿ ಮಠಕ್ಕೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ.

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ರೆಡ್ಡಿ ಸಮಾಜದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶಾಂತಮಲ್ಲಿಕಾರ್ಜುನ ಶಿವಯೋಗಿಗಳು ಕಾಣಿಸಿಕೊಂಡು ಸಮಾಜ ಕಟ್ಟುವ ಕಾರ್ಯದಲ್ಲೂ ಸ್ವಾಮಿಜಿ ಮುಂಚೂಣಿಯಲ್ಲಿದ್ದರು ಸದ್ಯ ಬೆಳಕಿಗೆ ಬಂದಿರುವ ಪ್ರಕರಣದಿಂದ ಯಾವ ನಡೆ ಅನುಸರಿಸುತ್ತಾರೆ ಎಂಬುದು ನಿಗೂಢವಾಗಿ ಉಳಿದಿದೆ.

Related