ಬೆಂಗಳೂರು: ಬೊಮ್ಮನಹಳ್ಳಿಯಲ್ಲಿ ಕೋವಿಡ್ 19 ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಸೋಂಕಿತರ ರಕ್ಷಣೆಗೆ 12 ಹೊಸ ಆಂಬುಲೆನ್ಸ್ ಬಂದವು
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕೊರೋನಾ ತಡೆಗಟ್ಟಲು ಅಧಿಕಾರಿಗಳು ಮಿಂಚಿನ ವೇಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೊರೋನಾ ಸೋಂಕಿತರ ರಕ್ಷಣೆಗೆ 12 ಹೊಸ ಆಂಬುಲೆನ್ಸ್ಗಳು ಬಂದು ತಲುಪಿದ್ದು, ಒಟ್ಟು 17 ಆಂಬುಲೆನ್ಸ್, 7 ಟಿಟಿ ವಾಹನಗಳು ಕಾರ್ಯನಿರ್ವಹಿಸಲಿವೆ ಎಂದು ಬಿಬಿಎಂಪಿ ಜಂಟಿ ಆಯುಕ್ತ ರಾಮಕೃಷ್ಣ ಮಾಹಿತಿ ನೀಡಿದರು.
ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರ ಸಲಹೆ ಮೇರೆಗೆ ಬೊಮ್ಮನಹಳ್ಳಿಯ ಶಾಸಕ ಸತೀಶ್ ರೆಡ್ಡಿ, ಬೆಂಗಳೂರು ದಕ್ಷಿಣ ವಿಭಾಗದ ಶಾಸಕ ಎಂ.ಕೃಷ್ಣಪ್ಪ, ಹಿರಿಯ ಐಎಎಸ್ ಅಧಿಕಾರಿ ಮಣಿವಣ್ಣನ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಬೊಮ್ಮನಹಳ್ಳಿಯಲ್ಲಿ 5 ಆಂಬುಲೆನ್ಸ್ಗಳು ಕಾರ್ಯನಿರ್ವಹಿಸುತ್ತಿದ್ದವು. ಮತ್ತಷ್ಟು ಆಂಬುಲೆನ್ಸ್ಗಳ ಬಗ್ಗೆ ಸಚಿವರಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಬೇಡಿಕೆಯನ್ನು ಪುರಸ್ಕರಿಸಿದ ಅವರು ಬೊಮ್ಮನಹಳ್ಳಿಗೆ ಆಂಬುಲೆನ್ಸ್ ನೀಡಿದ್ದಾರೆ. ಇನ್ನಷ್ಟು ಆಂಬುಲೆನ್ಸ್ ಕೊಡುವ ಭರವಸೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಬೊಮ್ಮನಹಳ್ಳಿಯಲ್ಲಿರುವ 735 ಬೂತ್ಗಳಿಗೆ ಅಧಿಕಾರಿಗಳು, ಸ್ವಯಂಸೇವಕರನ್ನು ನೇಮಕ ಮಾಡಲಾಗಿದೆ. ಮನೆಮನೆಗೆ ತೆರಳಿ ತಿಳುವಳಿಕೆ ನೀಡುತ್ತಿರುವುದರ ಜೊತೆಗೆ ಹೋಂ ಕ್ವಾರಂಟೈನ್ನಲ್ಲಿ, ಹೋಂ ಐಸೋಲೇಷನ್ನಲ್ಲಿದ್ದವರ ಮನೆಗಳಿಗೆ ಭಿತ್ತಿಪತ್ರಗಳನ್ನು ಅಂಟಿಸುವ ಕಾರ್ಯ ಮಾಡುತ್ತಿದ್ದೇವೆ. ಅಧಿಕಾರಿಗಳು, ಕಾಪೋರೇಟರ್ಗಳು, ಸ್ವಯಂಸೇವಕರ ಸಹಕಾರದಿಂದ ಕಾರ್ಯಗಳು ಉತ್ತಮವಾಗಿ ಸಾಗುತ್ತಿವೆ. ಬೊಮ್ಮನಹಳ್ಳಿಯನ್ನು ಕೊರೋನಾ ಮುಕ್ತಗೊಳಿಸಲು ಶ್ರಮಿಸುತ್ತಿದ್ದೇವೆ ಎಂದು ಹೇಳಿದರು.