ಜನರ ಸಮಸ್ಯೆಗೇ ಬಸಪ್ಪನಿಂದ ಉತ್ತರ

ಜನರ ಸಮಸ್ಯೆಗೇ ಬಸಪ್ಪನಿಂದ ಉತ್ತರ

ಮಂಡ್ಯ : ಜಿಲ್ಲೆಯ ಚೀರನಹಳ್ಳಿ ಗ್ರಾಮಸ್ಥರಲ್ಲಿ ಕಳೆದ 5 ವರ್ಷದಿಂದ ಸಮಸ್ಯೆಯಾಗಿ ಉಳಿದಿದ್ದ ಪ್ರಶ್ನೆಯೊಂದನ್ನ ಚಿಕ್ಕರಸಿನಕೆರೆಯ ಕಾಲಭೈರವೇಶ್ವರ ಸ್ವಾಮಿ ಬಸವಣ್ಣ ಒಂದೇ ಗಂಟೆಯಲ್ಲಿ ಉತ್ತರಿಸಿ ಜನರನ್ನ ಚಕಿತಗೊಳಿಸಿದ್ದಾರೆ.

ವಿಚಿತ್ರವಾದರೂ ಇದು ಸತ್ಯ. ದೇವಸ್ಥಾನದ ಅರ್ಚಕರ ನೇಮಕಕ್ಕೆ ಸಂಬಂಧಿಸಿದಂತೆ ಒಂದು ಸಮಸ್ಯೆ ಎದುರಾಗಿತ್ತು. ಚೀರನಹಳ್ಳಿಯಲ್ಲಿ ಉರುಗಮ್ಮದೇವಿ ದೇವಸ್ಥಾನವಿದ್ದು, ಅಲ್ಲಿ ಮಸಣಯ್ಯ ಎಂಬುವರು ಅರ್ಚಕರಾಗಿದ್ದರು. ಇವರು ಮೃತಪಟ್ಟಮೇಲೆ ಸಮಸ್ಯೆ ಶುರುವಾಗಿತ್ತು. ಅವರ ನಂತರ ದೇವಸ್ಥಾನಕ್ಕೆ ಯಾರನ್ನು ಅರ್ಚಕರನ್ನಾಗಿ ಮಾಡಬೇಕು..? ಎನ್ನುವ ಗೊಂದಲ ಶುರುವಾಗಿತ್ತು.  ಒಬ್ಬೊಬ್ಬರದ್ದು  ಒಂದೊಂದು ಉತ್ತರ ಬಂದಿದ್ದರಿಂದ ಸಮಸ್ಯೆ ಕೊನೆಗೂ ಬಗೆಹರಿಯಲೇ ಇಲ್ಲ.

ಹೀಗೆ 5 ವರ್ಷ ಕಳೆದೇ ಹೋಯಿತು. ಇದೀಗ ಚಿಕ್ಕರಸಿನಕೆರೆಯ ಕಾಲಭೈರವೇಶ್ವರಸ್ವಾಮಿ ಬಸಪ್ಪನನ್ನು ಗ್ರಾಮಕ್ಕೆ ಕರೆತಂದು ಊರ ಹೊರಗಿರುವ ಕಲ್ಯಾಣಿ ಬಳಿ ಬಸಪ್ಪನಿಗೆ ಪೂಜೆ ಮಾಡಿ ಅರ್ಚಕ ನೇಮಕಾತಿ ಪ್ರಕ್ರಿಯೆ ಶುರು ಮಾಡಲಾಗಿತ್ತು.

ಈ ದೃಶ್ಯ ನೋಡಲು ತಂಡೋಪತಂಡವಾಗಿ  ಜನರು ಆಗಮಿಸಿದ್ದರು. ಅಲ್ಲಿಗೆ ಬಂದ ಬಸವಣ್ಣ ಅಲ್ಲಿ ನೆರೆದಿದ್ದ ಸಹಸ್ರಾರು ಜನರಲ್ಲಿ ಶಿವಣ್ಣ ಎಂಬುವವರನ್ನು ಕೊಂಬಿನಿಂದ ತಿವಿಯಿತು. ಇದು ಅವರನ್ನೇ ಆಯ್ಕೆ ಮಾಡುವ ಸೂಚನೆ ಎಂದು ತಿಳಿದ ಗ್ರಾಮಸ್ಥರು ಖುಷಿಯಿಂದ ಅವರ ನೇಮಕಕ್ಕೆ ಮುಂದಾಗಿದ್ದಾರೆ. ಅಚ್ಚರಿ ಎಂದರೆ ಬಸವಣ್ಣ ಶಿವಣ್ಣ ಅವರನ್ನು ತಿವಿದದ್ದು ಮಾತ್ರವಲ್ಲದೇ ಅವರನ್ನು ನೂಕಿಕೊಂಡು ಕಲ್ಯಾಣಿಯ ಒಳಗೆ ತಳ್ಳಿತು. ಇದನ್ನು ಕಂಡ ಜನ ಹರ್ಷದಿಂದ ಕೇಕೇ ಹಾಕಿದರು. ಅಲ್ಲಿಗೆ ಅರ್ಚಕರ ನೇಮಕ ಸಮಸ್ಯೆ ಮುಗಿದಿದೆ. ಶಿವಣ್ಣ ಅವರೇ ಮುಂದಿನ ಅರ್ಚಕರಾಗಲಿದ್ದಾರೆ.

Related