ಬೆಂಗಳೂರು: ಹೆಸರು ಮಾತ್ರ ಚಿರಂಜೀವಿ. ಆದರೆ ವಿಧಿಯಾಟಕ್ಕೆ ಅಲ್ಪಾಯುಷಿಯಾದ್ರು. ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ನೆಲಗುಳಿ ಬಳಿಯ ಫಾರ್ಮ್ ಹೌಸ್ನಲ್ಲಿ ನೆರವೇರಿತು.
ಚಿರಂಜೀವಿ ಸರ್ಜಾ (39) ಭಾನುವಾರ ಮಧ್ಯಾಹ್ನ ಹೃದಯಾಘಾತದಿಂದ ಬೆಂಗಳೂರಿನ ಜಯನಗರದ ಅಪೊಲೋ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದರು.
ರುದ್ರತಾಂಡವ, ದಂಡಂ ದಶಗುಣಂ, ವಾಯುಪುತ್ರ ಅಜಿತ್, ಆಟಗಾರ ಸೇರಿದಂತೆ 22ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿಷೇಕ್ ಅಂಬರಿಶ್, ಸುದೀಪ್ , ತಾರಾ, ದ್ವಾರಕಿಶ್, ಉಪೇಂದ್ರ , ಯಶ್ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದಿದ್ದು, ಚಿತ್ರರಂಗದ ಅನೇಕ ಗಣ್ಯರು, ರಾಜಕೀಯ ಮುಖಂಡರು ಕಂಬನಿ ಮಿಡಿದಿದ್ದಾರೆ.
2017ರಲ್ಲಿ ನಟಿ ಮೇಘನಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಚಿರಂಜೀವಿ, 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.