ಬೊಮ್ಮನಹಳ್ಳಿ: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಹುಳಿಮಾವು ವಾರ್ಡ್ ನ ಬಡಾವಣೆಗಳ ಮತದಾರರನ್ನು ಪಕ್ಕದ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆ ಮಾಡಲಾಗಿದೆ’ ಎಂದು ಶಾಸಕ ಸತೀಶ್ ರೆಡ್ಡಿ ಆರೋಪಿಸಿದರು.
ಹುಳಿಮಾವು ವಾರ್ಡ್ ನ ಅಕ್ಷಯ ಗಾರ್ಡನ್, ಶಿರಡಿ ಸಾಯಿ ನಗರ, ಹಿರಾನಂದಿನಿ ಅಪಾರ್ಟ್ಮೆಂಟ್, ಮುಂತಾದ ಪ್ರದೇಶಗಳ ಸುಮಾರು 7,50೦ ಸಾವಿರ ಮತದಾರರ ಹೆಸರು ದಕ್ಷಿಣ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಕಂಡು ಬಂದಿದೆ. ಇದು ಅಕ್ಷಮ್ಯ, ಅಧಿಕಾರಿಗಳ ನಿರ್ಲಕ್ಷವೋ ಅಥವಾ ಉದ್ದೇಶಪೂರ್ವಕವೋ ತಿಳಿಯದು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿನ ನಿವಾಸಿಗಳು ನೀಡಿದ ದೂರಿನ ಅನ್ವಯ ಬಿಬಿಎಂಪಿ, ಚುನಾವಣಾ ಆಯೋಗ ಹಾಗೂ ಜಿಲ್ಲಾಧಿಕಾರಿಗೆ ಸತೀಶ್ ರೆಡ್ಡಿ ದೂರು ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಬಿಬಿಎಂಪಿ, ಚುನಾವಣಾ ಆಯೋಗ ಮತ್ತು ಜಿಲ್ಲಾಧಿಕಾರಿಗಳಿಗೆ ದಿನಾಂಕ 18-08-2022 ರಂದು ಲಿಖಿತ ದೂರು ನೀಡಲಾಗಿದ್ದು ಆದರಂತೆ ಆದೇಶ ಸಂಖ್ಯೆ- ಪಿ.ಆರ್- 17/22-23 ಆದೇಶ ನೀಡಿದ್ದರೂ, ಪರಿಷ್ಕೃತ ಮತದಾರರ ಪಟ್ಟಿಯನ್ನು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ವರ್ಗಾಯಿಸಿಲ್ಲ. ಈ ಸಂಬಂಧ ಚುನಾವಣಾ ಆಯೋಗಕ್ಕೆ ನಿರ್ದೇಶನವನ್ನು ನೀಡಬೇಕೆಂದು ಹೈಕೋರ್ಟ್ ನಲ್ಲಿ ಮೊಕದ್ದಮೆ ಹೂಡಲಾಗಿದೆ’ ಎಂದರು.
ವಾರ್ಡ್ ಮರುವಿಂಗಡಣೆ ವೇಳೆ ವಿಧಾನಸಭಾ ಕ್ಷೇತ್ರದ ಗಡಿಗಳನ್ನು ಸರಿಯಾಗಿ ಗುರುತಿಸಲಾಗಿದೆಯಾದರೂ, ಮತದಾರರನ್ನು ಮಾತ್ರವೇ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬೇಗೂರು ಮತ್ತು ಕಾಳೇನ ಅಗ್ರಹಾರ ವಾರ್ಡ್ ಗಳಿಗೆ ವರ್ಗಾಯಿಸಿರುವುದು ಏಕೆ? ಎಂದು ಪ್ರಶ್ನಿಸಿದರು.
ವಾರ್ಡ್ ಪುನರ್ ವಿಂಗಡಣೆ, ಮೀಸಲಾತಿಯ ಕುರಿತಾಗಲಿ ಅಥವಾ ಚುನಾವಣೆಯನ್ನು ಮುಂದೂಡುವ ಯಾವುದೇ ಉದ್ದೇಶದಿಂದ ಈ ದಾವೆಯನ್ನು ಹೂಡಿರುವುದಿಲ್ಲ. ನನ್ನ ಮತಕ್ಷೇತ್ರದ ಮತದಾರರನ್ನು ನಮ್ಮ ನಮ್ಮಲ್ಲಿಯೇ ಉಳಿಸಿಕೊಳ್ಳುವ ಉದ್ದೇಶದಿಂದ ಮಾತ್ರವೇ ದಾವೆ ಹೂಡಿರುತ್ತೇನೆ, ಇದನ್ನು ತಪ್ಪಾಗಿ ಅರ್ಥೈಸಬಾರದಾಗಿ ಸತೀಶ್ ರೆಡ್ಡಿ ಕೋರಿದ್ದಾರೆ.