ತುಂಗಭದ್ರಾ ನದಿಯೂ ಮೂರು ರಾಜ್ಯಗಳ ಮಧ್ಯೆ ಹರಿಯುತ್ತಿರುವುದರಿಂದ ಟಿಬಿಪಿಯು ಕೇಂದ್ರ ಸರಕಾರದಿಂದ ನೇಮಿಸಲ್ಪಟ್ಟ ಅಧಿಕಾರಿಗಳು ಇರುತ್ತಾರೆ, ನೀರಿನ ಹಂಚಿಕೆಯ ಬಗ್ಗೆ ಟಿಬಿಪಿಯಲ್ಲಿಯೇ ನಿರ್ಧರಿಸುತ್ತಿದ್ದು, ಟಿಬಿಪಿಯು ನೀರಿನ ಪ್ರಮಾಣದಲ್ಲಿ ತಪ್ಪು ಲೆಕ್ಕ ನೀಡುತ್ತಿದೆ ಎಂಬ ಆರೋಪವು ಇದೆ.
ಕೊಪ್ಪಳ ಜು 19 : ತುಂಗಭದ್ರಾ ಜಲಾಶಯ ನಿರ್ಮಾಣವಾದ ನಂತರ ಇದೇ ಪ್ರಥಮ ಬಾರಿಗೆ ಜಲಾಶಯದ ನೀರಿನ ಸಂಗ್ರಹ ಹೆಚ್ಚಳವಾಗಿದೆ. ಈ ಹಿಂದೆ ಪ್ರತಿ ವರ್ಷ ಅರ್ಧ ಟಿಎಂಸಿ ಹೂಳು ತುಂಬುತ್ತದೆ ಎಂಬ ವರದಿ ಇತ್ತು, ಆದರೆ ಈಗ ಜಲಾಶಯದಲ್ಲಿ 5 ಟಿಎಂಸಿ ನೀರಿನ ಸಂಗ್ರಹ ಹೆಚ್ಚಳವಾಗಿದೆ ಎಂದು ಟಿಬಿಪಿ ದಾಖಲಿಸುತ್ತಿದೆ. ಈ ಬಗ್ಗೆ ರಾಜ್ಯ ಸರಕಾರದಿಂದ ಆಕ್ಷೇಪವಿದೆ. ಮತ್ತೊಮ್ಮೆ ಸರ್ವೆ ಮಾಡಲು ನಿರ್ಧರಿಸಿದೆ.
ಕರ್ನಾಟಕ, ಆಂಧ್ರ ಹಾಗು ತೆಲಂಗಾಣ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯವು ನಿರ್ಮಾಣವಾಗಿ 66 ವರ್ಷವಾಗಿದೆ. ಕಳೆದ 66 ವರ್ಷದಲ್ಲಿ ಜಲಾಶಯಕ್ಕೆ ಪ್ರತಿವರ್ಷ ಅರ್ಧ ಟಿಎಂಸಿಯಷ್ಟು ಹೂಳು ತುಂಬುತ್ತಿದೆ ಎಂದು ಈ ಹಿಂದಿನ ವರದಿಯಲ್ಲಿ ದಾಖಲಿಸಲಾಗಿದೆ. ಇದರಿಂದಾಗಿ ಕಳೆದ ವರ್ಷದವರೆಗೂ ಜಲಾಶಯದಲ್ಲಿ ನೀರಿನ ಸಂಗ್ರಹವು 100.899 ಟಿಎಂಸಿ ನೀರು ಎಂದು ದಾಖಲಿಸಲಾಗುತ್ತಿತ್ತು. ಆದರೆ ಈ ವರ್ಷದಿಂದ ಜಲಾಶಯದಲ್ಲಿ ಒಟ್ಟು 105.788 ಟಿಎಂಸಿ ನೀರು ಸಂಗ್ರಹವಾಗುತ್ತಿದೆ ಎಂದು ತುಂಗಭದ್ರಾ ಯೋಜನಾ ಮಂಡಳಿ ದಾಖಲಿಸಿದೆ.