ಬೆಂಗಳೂರು: ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ 28 ದಿನಗಳಿಂದ ಯಾವ ಸಾಫ್ಟ್ವೇರ್ ಕೂಡ ಕೆಲಸ ಮಾಡುತ್ತಿಲ್ಲ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇ ಖಾತೆ ಇಲ್ಲದೆ ನೋಂದಣಿ ಇಲ್ಲ ಎಂಬ ಹೊಸ ಷರತ್ತನ್ನು ಜಾರಿ ಮಾಡಿದ್ದಾರೆ. ಪೂರ್ವಾಪರ ಯೋಚಿಸದೆ ಹೀಗೆ ಮಾಡಿದ್ದಾರೆ. ಬೆಂಗಳೂರಿನಲ್ಲಿ 1 ಲಕ್ಷ 70 ಸಾವಿರ ಬಿಡಿಎ ನಿವೇಶನಗಳಿವೆ. ಹೌಸಿಂಗ್ ಸೊಸೈಟಿಯ 60 ಸಾವಿರ ನಿವೇಶನಗಳಿವೆ. 30ರಿಂದ 35 ಸಾವಿರ ಬಿಡಿಎ ಅಪ್ರೂವ್ಡ್ ಸೈಟ್ಗಳಿವೆ. ಉಳಿದ 17 ಲಕ್ಷ ಪ್ರಾಪರ್ಟಿಗಳನ್ನು ಕಾನೂನುಬಾಹಿರ ಎಂದಿದ್ದಾರೆ. ಇದೆಲ್ಲರ ಪರಿಣಾಮ ಕಳೆದ 3 ತಿಂಗಳಿನಿಂದ ಸುಮಾರು ನಾಲ್ಕೈದು ಸಾವಿರ ಕೋಟಿ ಆದಾಯ ಸರಕಾರದ ಕೈತಪ್ಪಿ ಹೋಗಿದೆ ಎಂದು ವಿವರಿಸಿದರು.
ಸಚಿವ ಕೃಷ್ಣಬೈರೇಗೌಡರು ಇದರ ಕಡೆ ಗಮನ ಕೊಡುತ್ತಿಲ್ಲ, ಬಿಬಿಎಂಪಿಯ ತುಷಾರ್ ಗಿರಿನಾಥ್, ಮನೀಷ್ ಮುದ್ಗಲ್ ಅವರು ತಮ್ಮದೇ ಆದ ರೀತಿಯಲ್ಲಿ ಐಡಿಯ ಕೊಡುತ್ತಿದ್ದು, ಕೃಷ್ಣಬೈರೇಗೌಡರು ತುತ್ತೂರಿ ಊದುತ್ತಿದ್ದು ಕೆಲಸ ಆಗುತ್ತಿಲ್ಲ, ಮಂಜೂರಾದ ವೈದ್ಯಕೀಯ ಸೀಟಿಗೆ ಹಣ ಕಟ್ಟಲು ಆಸ್ತಿ ಮಾರಾಟ ಮಾಡಲು ಆಗುತ್ತಿಲ್ಲ ಎಂದು ದೂರಿದರು. ಇದನ್ನೂ ಓದಿ: ಹೆಚ್ ಡಿಕೆ ಮೊದಲು ಮೇಕೆದಾಟಿಗೆ ಅನುಮತಿ ಕೊಡಿಸಲಿ: ಡಿಸಿಎಂ
ಎನ್ಕಂಬರೆನ್ಸ್, ಸರ್ಟಿಫೈಡ್ ಕಾಪಿ ಸಿಗುತ್ತಿಲ್ಲ. ಎನ್ಕಂಬರೆನ್ಸ್ ಕೇಳಿದರೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸರ್ವರ್ ಡೌನ್ ಎನ್ನುತ್ತಾರೆ ಎಂದು ಟೀಕಿಸಿದರು. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಒಟಿಪಿ ಬಾರದೆ ನೋಂದಣಿ ಕಾರ್ಯ ನಡೆಯುತ್ತಿಲ್ಲ; ಕಾವೇರಿ 2 ಆ್ಯಪ್ ಬಂದ ಬಳಿಕ ಒಂದು ದಿನದ ಮುಂದೆ ಹಣ ಕಟ್ಟಬೇಕಾಗಿದೆ. ನಿಗದಿತ ಅವಧಿಯಲ್ಲಿ ಹೋದರೆ ಸಾಫ್ಟ್ವೇರ್ ಕೆಲಸ ಮಾಡದೆ ಸರ್ವರ್ ಡೌನ್ ಎಂಬ ಉತ್ತರ ಸಿಗುತ್ತದೆ. ನೋಂದಣಿ ನಡೆಯದೆ ಗೊಂದಲ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಳೆದ 2 ತಿಂಗಳುಗಳಿಂದ ಇ ಖಾತಾ ಹೆಸರಿನಲ್ಲಿ ಉಪ ನೋಂದಣಿ ಕಚೇರಿಯಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಕೆಲಸ ಸ್ಥಗಿತವಾಗಿದ್ದು, ಸಾಮಾನ್ಯ ಜನರು, ಬಡವರು ಕಷ್ಟಕಾಲದಲ್ಲಿ ಆಸ್ತಿ ಮಾರಾಟ ಮಾಡಲು ಅಥವಾ ಕೊಳ್ಳಲಾಗದ, ಬ್ಯಾಂಕಿನಲ್ಲಿ ಅಡಮಾನ ಮಾಡಿ ಸಾಲ ಪಡೆಯಲು, ಕೈಸಾಲಕ್ಕೆ ತೊಂದರೆ ಆಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.