ಸತೀಶ್ ರೆಡ್ಡಿ ಕೊಲೆಗೆ 2 ಕೋಟಿ ಸುಪಾರಿ!?

ಸತೀಶ್ ರೆಡ್ಡಿ ಕೊಲೆಗೆ 2 ಕೋಟಿ ಸುಪಾರಿ!?

ಬೊಮ್ಮನಹಳ್ಳಿ: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ವಿಧಾನಸಭೆ ಆಡಳಿತ ಪಕ್ಷದ ಮುಖ್ಯ ಸಚೇತಕರಾಗಿರುವ ಸತೀಶ್ ರೆಡ್ಡಿ ಕೊಲೆಗೆ ಸುಪಾರಿ ನೀಡಿರುವ ಆರೋಪದಲ್ಲಿ ಹೊಳಲ್ಕೆರೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಆಕಾಶ್, ಗಗನ್ ಬಂಧಿತ ಆರೋಪಿಗಳು. ವಿಲ್ಸನ್ ಗಾರ್ಡ್ ನಾಗಾನಿಗೆ ಸತೀಶ್ ರೆಡ್ಡಿ ಅವರ ಹತ್ಯೆಗೆ ಸುಪಾರಿ ನೀಡಿದ್ದರು ಎಂದು ಹೇಳಲಾಗುತ್ತಿದೆ. ಈ ಮಾಹಿತಿ ಪೊಲೀಸರಿಗೆ ಸಿಕ್ಕ ಹಿನ್ನೆಲೆಯಲ್ಲಿ ಅವರನ್ನು ಬಂಧನ ಮಾಡಲಾಗಿದೆ. ಬಂಧಿತರನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

ಕುಖ್ಯಾತ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ಟೀಮ್ ಬೆಂಗಳೂರು MLA ಕೊಲೆಗೆ ಸ್ಕೆಚ್ ಹಾಕಿತ್ತು ಎನ್ನಲಾಗಿದೆ. ಶಾಸಕರ ಚಲನವಲನಗಳ ಬಗ್ಗೆ ನಿಗಾವಹಿಸಿದ್ದ ನಾಗ ಮತ್ತವರ ತಂಡ 2 ಕೋಟಿಗೆ ಸುಪಾರಿ ಪಡೆದುಕೊಂಡಿತ್ತು. ಆದರೆ ಈ ಅಟ್ಯಾಕ್‌ಗೂ ಮುಂಚೆ ರೌಡಿಶೀಟರ್ ನಾಗನ ಗ್ಯಾಂಗ್‌ನಿಂದಲೇ ವಿಷಯ ಲೀಕ್ ಆಗಿದೆ. ಚಿತ್ರದುರ್ಗದಲ್ಲಿದ್ದ ನಾಗನ ಗ್ಯಾಂಗ್‌ನ ಆಕಾಶ್ ಕೊಲೆಯ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಎಂಎಲ್‌ಎ ಬೆಂಬಲಿಗ ಬೊಮ್ಮನಹಳ್ಳಿ ನಿವಾಸಿ ಚಂದ್ರು ಕರೆ ಮಾಡಿ ಕೇಳಿದಾಗ ಆಕಾಶ್ ಕೊಲೆಯ ಸಂಚು ನಡೆದಿರುವ ವಿಷಯ ಬಾಯ್ದಿಟ್ಟಿದ್ದಾನೆ. ಆಕಾಶ್ ಆಡಿಯೋ ಮತ್ತು ರೌಡಿಗಳ ಫೋಟೋವನ್ನು ಇದೀಗ ಬೊಮ್ಮನಹಳ್ಳಿ ಪೊಲೀಸರಿಗೆ ನೀಡಲಾಗಿದೆ.

ಈ ಬಗ್ಗೆ ಮಾತನಾಡಿದ ಬಿಜೆಪಿ ಶಾಸಕ ಸತೀಶ್ ರೆಡ್ಡಿ, ‘ರಾಜಕೀಯ ಕಾರಣಕ್ಕಾಗಿ ಕೊಲೆಗೆ ಸುಪಾರಿ ನೀಡಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ಮಾಡುತ್ತಿದ್ದಾರೆ. ಇವರಿಗೆ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಬೇಕು. ಸಮಗ್ರ ತನಿಖೆ ಕೈಗೊಂಡು ಈ ಕೃತ್ಯದ ಹಿಂದೆ ಇರುವವರನ್ನು ಬಂಧನಕ್ಕೊಳಪಡಿಸಬೇಕು ಎಂದರು.

 

Related