ಬೆಂಗಳೂರು: 2023 ನೇ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿಯವರು ಹೀನಾಯವಾಗಿ ಸೋಲನ್ನು ಕಂಡಿದ್ದಾರೆ.
ಚುನಾವಣೆಯಲ್ಲಿ ಸೋಲನ್ನು ಕಂಡಿದ್ದರು ಸಹ ಮತ್ತೆ ಬಣ್ಣದ ಲೋಕಕ್ಕೆ ಕಾಲಿಡಲು ಮನಸ್ಸು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಹೌದು, ನಿಖಿಲ್ ಕುಮಾರಸ್ವಾಮಿ ಅವರು ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದ ಕಾರಣ ಹಲವಾರು ತಿಂಗಳುಗಳಿಂದ ಬಣ್ಣದ ಲೋಕದಿಂದ ದೂರವಿದ್ದರು.
ಸ್ಯಾಂಡಲ್ವುಡ್ನ ಯಂಗ್ ಹೀರೋ ನಿಖಿಲ್ ಕುಮಾರ್ ಕಳೆದ ಕೆಲ ತಿಂಗಳಿಂದ ಸಿನಿಮಾದಿಂದ ದೂರ ಉಳಿದು ರಾಜಕಾರಣದಲ್ಲಿ ಹೆಚ್ಚು ಸಕ್ರಿಯರಾಗಿದ್ದರು. ಅದಕ್ಕೆ ಕಾರಣ ಈ ಸಲದ ಕರ್ನಾಟಕ ವಿಧಾನಸಭಾ ಚುನಾವಣೆ. ರಾಜ್ಯದಲ್ಲೆಲ್ಲ ಸುತ್ತಾಡಿ ಅಬ್ಬರದ ಪ್ರಚಾರ ಮಾಡಿದರೂ ಜೆಡಿಎಸ್ ಗಟ್ಟಿಯಾಗಿ ನಿಲ್ಲಲಿಲ್ಲ. ಇತ್ತ ಲೋಕಸಭೆ ಚುನಾವಣೆ ಸೋಲಿನ ಬಳಿಕ ವಿಧಾನಸಭೆ ಚುನಾವಣೆಗೂ ಧುಮುಕಿದ್ದ ನಿಖಿಲ್ಗೆ ಅಲ್ಲಿಯೂ ಸೋಲಾಯಿತು.
ಇದೀಗ ಆ ಸೋಲಿನ ಬಳಿಕ ಮತ್ತೆ ಬಣ್ಣದ ಲೋಕಕ್ಕೆ ಮರಳಲು ನಿಖಿಲ್ ಮನಸ್ಸು ಮಾಡಿದ್ದಾರಂತೆ. ಅದ್ದೂರಿ ಬಜೆಟ್ನ ಹಲವು ಸಿನಿಮಾಗಳಲ್ಲಿ ನಿಖಿಲ್ ನಟಿಸಿದರೂ, ಅಲ್ಲಿಯೂ ಹೇಳಿಕೊಳ್ಳುವಂಥ ಗೆಲುವು ಅವರಿಗೆ ದಕ್ಕಿಲ್ಲ. ಹಾಗೆಂದ ಮಾತ್ರಕ್ಕೆ ಅವರೇನು ಸಿನಿಮಾದಿಂದಲೂ ದೂರವಿಲ್ಲ. ಈಗಲೂ ಹಲವು ಸಿನಿಮಾಗಳಿಗೆ ನಿಖಿಲ್ ಸಹಿ ಮಾಡಿದ್ದಾರೆ. ಬಿಗ್ ಬಜೆಟ್ನಲ್ಲಿಯೇ ಸಿನಿಮಾಗಳು ತಯಾರಾಗುತ್ತಿವೆ. ಹೀಗಿರುವಾಗಲೇ ಚುನಾವಣೆ ಸಲುವಾಗಿ ದೂರ ಉಳಿದಿದ್ದ ನಿಖಿಲ್, ಮತ್ತೆ ಬಣ್ಣದ ಲೋಕದ ಕಡೆ ವಾಲಲು ಮನಸು ಮಾಡಿದ್ದಾರೆ.