ಬೃಹತ್ ಬ್ರಹ್ಮಾಂಡ ಭ್ರಷ್ಟಾಚಾರ

ಬೃಹತ್ ಬ್ರಹ್ಮಾಂಡ ಭ್ರಷ್ಟಾಚಾರ

ಶಿವಮೊಗ್ಗ : ಸಾಗರ ತಾಲೂಕಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬೃಹತ್ ಬ್ರಹ್ಮಾಂಡ ಭ್ರಷ್ಟಾಚಾರವೇ ಅಡಗಿದೆ. ಹೆರಿಗೆಗಾಗಿ ದಾಖಲಾಗುವ ಮಹಿಳೆಯರಿಂದ ಟಾರ್ಗೆಟ್ ಮಾಡಿ ಲಂಚದ ರೂಪದಲ್ಲಿ ಸಾವಿರಾರೂ ರೂ.ಗಳನ್ನು ಇಲ್ಲಿನ ವೈದ್ಯರು, ಸಿಬ್ಬಂದಿ ಪಡೆಯುತ್ತಿದ್ದಾರೆ.

ನಾರ್ಮಲ್ ಹೆರಿಗೆ ಬದಲು ಸಿಜೇರಿಯನ್ ಹೆರಿಗೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವ ಇಲ್ಲಿನ ವೈದ್ಯರು, ಸಿಬ್ಬಂದಿ, ಸಾವಿರಾರು ರೂಪಾಯಿಗಳನ್ನು ಹೆರಿಗೆಗಾಗಿ ಪಡೆಯುತ್ತಿದ್ದಾರೆ.

ಈ ಬಗ್ಗೆ ತಾ.ಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಸಿಎಂ ಬಿಎಸ್‌ವೈ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ಮಾ. 25ರಂದು ನಡೆದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಾಕಷ್ಟು ಹೆರಿಗೆಗಳಾಗುತ್ತಿದ್ದು, 2,720 ಹೆರಿಗೆಗಳಾಗಿದ್ದಾಗಿ ತಿಳಿದು ಬಂದಿದೆ. ಇಂತಹ ಹೆರಿಗೆಗಳಲ್ಲಿ 1,113 ಸಿಸೇರಿಯನ್ ಆಗಿದ್ದಾಗಿ ತಿಳಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.15ಕ್ಕಿಂತ ಹೆಚ್ಚು ಸಿಜೇರಿಯನ್ ಮಾಡಬಾರದಾಗಿ ಸರ್ಕಾರಿ ಮಾನದಂಡ ಇದೆ. ಹೀಗಿದ್ದರೂ ಹೆಚ್ಚಾಗಿ ಸಿಜೇರಿಯನ್ ಮಾಡಿ ಜನರಿಂದ ಹಣ ವಸೂಲು ಮಾಡಲಾಗುತ್ತಿರುವುದು ಕಂಡು ಬರುತ್ತಿದೆ. ಹಣಕ್ಕಾಗಿಯೇ ಈ ರೀತಿ ಸಿಜೇರಿಯನ್ ಮಾಡುತ್ತಿರುವುದಾಗಿ ಸಾರ್ವಜನಿಕರು ದೂರುತ್ತಿದ್ದಾರೆ.

ಸರ್ಕಾರಿ ಆಸ್ಪತ್ರೆಗಳು ಬಡವರಿಗಾಗಿ ಅನುಕೂಲವಾಗಬೇಕೆ ಹೊರತು, ಈ ರೀತಿ ಹಣ ವಸೂಲು ಮಾಡುವ ಕೇಂದ್ರಗಳಾಗಬಾರದು. ಈ ಬಗ್ಗೆ ಸಂಪೂರ್ಣವಾಗಿ ಪರಿಶೀಲಿಸಿ ಸರ್ಕಾರದ ಮಾರ್ಗಸೂಚಿಯಂತೆ ಸರ್ಕಾರಿ ಕರ್ತವ್ಯ ನಿರ್ವಹಿಸಲು ಸೂಚನೆ ನೀಡಿ, ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮವಹಿಸುವಂತೆ ಕೋರಿದ್ದಾರೆ.

ಅಂದಹಾಗೇ, ಹೆರಿಗೆ ವಿಭಾಗದ ಸಿಜೇರಿಯನ್ ಮಾಡಿದಕ್ಕೆ 5 ಸಾವಿರ ರೂ. ಸಹಜ ಹೆರಿಗೆಗೆ 3 ಸಾವಿರ ರೂ. ಅನಸ್ತೇಶಿಯಾ ವೈದ್ಯರಿಗೆ 2 ಸಾವಿರ ರೂ. ಸಾಗರದ ಮಕ್ಕಳ ಮತ್ತು ಮಹಿಳಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭ್ರಷ್ಟ ವೈದ್ಯರು ಬಡವರ ರಕ್ತ ಹೀರುತ್ತಿದ್ದಾರೆ ಎನ್ನಲಾಗುತ್ತಿದೆ.

Related