ಇನ್ನೆರಡು ತಿಂಗಳಲ್ಲಿ ಇನ್ನೊಂದು ಉದ್ಯೋಗ ಮೇಳ : ಗೋಪಾಲಯ್ಯ ಕೆ

ಇನ್ನೆರಡು ತಿಂಗಳಲ್ಲಿ ಇನ್ನೊಂದು ಉದ್ಯೋಗ ಮೇಳ : ಗೋಪಾಲಯ್ಯ ಕೆ

ಮಂಡ್ಯ: ಜಿಲ್ಲೆಯಲ್ಲಿ ಹೆಚ್ಚಿನ ಅಭ್ಯರ್ಥಿಗಳಿಗೆ ಉದ್ಯೋಗ ಒದಗಿಸುವ ದೃಷ್ಠಿಯಿಂದ ಇನ್ನೂ 2 ತಿಂಗಳೊಳಗೆ ಇನ್ನೊಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗುವುದು ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಕೆ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ ಹಾಗೂ ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜು ಇವರಗಳ ಸಂಯುಕ್ತಾಶ್ರಯದಲ್ಲಿ ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರಿಗೂ ಉದ್ಯೋಗ ಒದಗಿಸಬೇಕು ಎಂಬ ಆಶಯದೊಂದಿಗೆ ಸರ್ಕಾರ ಕೌಶಲ್ಯಾಭಿವೃದ್ಧಿ ಇಲಾಖೆ ಮೂಲಕ ವಿವಿಧ ತರಬೇತಿಗಳನ್ನು ಆಯೋಜಿಸುತ್ತಿದೆ ಎಂದರು.

ಇಂದು ನಡೆಯುತ್ತಿರುವ ಉದ್ಯೋಗ ಮೇಳದಲ್ಲಿ ಸ್ಕಿಲ್ ಕನೆಕ್ಟ್ ಆನ್‌ಲೈನ್ ಮೂಲಕ 8000 ಕ್ಕೂ ಹೆಚ್ಚು ಅಭ್ಯರ್ಥಿಗಳು ಹೆಸರು ನೊಂದಣಿ ಮಾಡಿಕೊಂಡಿದ್ದಾರೆ. ಆಫ್‌ಲೈನ್ ಮೂಲಕ ಕೂಡ ಸ್ಥಳದಲ್ಲೇ ಹೆಸರು ನೊಂದಣಿ ಮಾಡಿಕೊಳ್ಳುತ್ತಿದ್ದಾರೆ. 103 ಕಂಪನಿಗಳು ಭಾಗವಹಿಸಿ ತಮಗೆ ಬೇಕಿರುವ ಕೌಶಲ್ಯವುಳ್ಳ ಅಭ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಕಾರ್ಯಪ್ರವೃತ್ತರಾಗಿದ್ದಾರೆ ಎಂದರು,

ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯಾರ್ಥಿಗಳು ಉದ್ಯೋಗ ಸಿಗದಿದ್ದಾರೆ ನಿರಾಶೆಗೆ ಒಳಗಾಗಬಾರದು. ಮುಂದಿನ ಜೀವನದಲ್ಲಿ ಬಹಳಷ್ಟು ಅವಕಾಶಗಳಿವೆ. ಜೀವನದಲ್ಲಿ ಗುರಿ ನಿಗಧಿಮಾಡಿಕೊಂಡು ಅದರ ಅನ್ವಯ ಸಿದ್ಧತೆಗಳನ್ನು ಮಾಡಿಕೊಳ್ಳಿ. ಇನ್ನೆರಡು ತಿಂಗಳಲ್ಲಿ ಇನ್ನೊಂದು ಬೃಹತ್ ಉದ್ಯೋಗ ಮೇಳವನ್ನು ಜಿಲ್ಲೆಯಲ್ಲಿ ಆಯೋಜಿಸಲಾಗುವುದು, ಆಗ ಇಲ್ಲಿ ನೊಂದಣಿಯಾದವರಿಗೂ ಅವಕಾಶ ಕಲ್ಪಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಡಾ: ಹೆಚ್.ಎನ್ ಗೋಪಾಲ ಕೃಷ್ಣ ಅವರು ಮಾತನಾಡಿ ಭಾರತದಲ್ಲಿ ಹೆಚ್ಚು ಯುವಜನತೆಯನ್ನು ಹೊಂದಿದ್ದು, ದುಡಿಯುವ ಕೈಗಳಿಗೆ ಉದ್ಯೋಗ ಒದಗಿಸಲುವುದು ಇಂದಿನ ದೊಡ್ಡ ಸವಾಲಾಗಿದೆ. ಉನ್ನತ ಶಿಕ್ಷಣ ಎಲ್ಲರೂ ಪಡೆಯುವುದು ಕಷ್ಟಕರ. ಎಸ್.ಎಸ್. ಎಲ್ .ಸಿ, ಪಿ.ಯುಸಿ ಡಿಪ್ಲಮಾ ವಿದ್ಯಾರ್ಹತೆ ಹೊಂದಿರುವವರೂ ಸಹ ವಿವಿಧ ಕೌಶಲ್ಯಾಭಿವೃದ್ಧಿ ತರಬೇತಿ ಪಡೆದು ಉದ್ಯೋಗ ಪಡೆದುಕೊಳ್ಳಬಹುದು, ಸರ್ಕಾರದ ಯೋಜನೆಗಳ ಮೂಲಕ ಸ್ವಯಂ ಉದ್ಯೋಗ ಕೈಗೊಂಡು ಅವರೇ  ಉದ್ಯೋಗ ದಾತರು ಸಹ ಆಗಬಹುದು ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿ ಉದ್ಯೋಗ ಪಡೆಯಲು ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ನೀಡುತ್ತಿದೆ. ಉದ್ಯೋಗ ಮೇಳಗಳನ್ನು ಆಯೋಜಿಸುತ್ತಿದೆ. ಕಂಪನಿಗಳು ಹಾಗೂ ಉದ್ದಿಮೆಗಳಿಗೆ ಉದ್ಯೋಗ ನೀಡಲು ಕೆಲವು ಕೌಶಲ್ಯಗಳನ್ನು ನಿಗಧಿ ಮಾಡಿಕೊಂಡಿರುತ್ತದೆ ಅದರ ಅನ್ವಯ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಎಂದರು.

ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ ಜಿಲ್ಲೆಯಲ್ಲಿ 4 ತರಬೇತಿ ಕೇಂದ್ರಗಳಲ್ಲಿ 270 ಫಲಾನುಭವಿಗಳಿಗೆ ತರಬೇತಿ ನೀಡಲಾಗುತ್ತಿದೆ. ಯಶಸ್ವಿ ಕ್ರೆಡಿಟ್ ಲಿಂಕ್ ಯೋಜನೆಯಡಿ ಉದ್ಯೋಗ ಕೈಗೊಳ್ಳಲು 73 ಸಂಘಗಳಿಗೆ ತಲಾ 1 ಲಕ್ಷ ರೂ ಸಾಲ ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ  ಶಾಸಕ ಎಂ.ಶ್ರೀನಿವಾಸ್, ಪಿ.ಇ.ಎಸ್ ವಿದ್ಯಾಸಂಸ್ಥೆ ಅಧ್ಯಕ್ಷ ಪಿ.ವಿಜಯಾನಂದ, ಜಿ.ಪಂ.ಸಿ.ಇ.ಒ.ಶಾಂತ ಎಲ್ ಹುಲ್ಮನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್  ಜನತಾ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಶಿವಪ್ರಸಾದ್, ಮಂಡ್ಯ ವಿಶ್ವವಿದ್ಯಾಲಯದ ಕುಲಸಚಿವ ನಾಗರಾಜ್, ಕಾರ್ಯನಿರ್ವಾಹಕ ನಿರ್ದೇಶಕರು, ಕೌಶಲ್ಯಭಿವೃದ್ಧಿ ನಿಗಮ ಡಿ ಎಲ್ ಕೃಷ್ಣಮೂರ್ತಿ, ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಮಹಲಿಂಗೇಗೌಡ ಸೇರಿದಂತೆ ಇನ್ನಿತರ ಗಣ್ಯರು  ಉಪಸ್ಥಿತರಿದ್ದರು.

Related