ಬೆಂಗಳೂರು: ಬೇಸಿಗೆ ಬಂತೆಂದರೆ ಸಾಮಾನ್ಯವಾಗಿ ಎಲ್ಲರಲ್ಲಿ ಕಾಡುವಂತಹ ಸಮಸ್ಯೆ ಅಂದರೆ ಸೂರ್ಯನ ಕಿರಣಗಳಿಂದ ಚರ್ಮದ ಮೇಲೆ ಉಂಟಾಗುವ ಬೆವರು ಗುಳ್ಳೆ, ಚರ್ಮ ಕಪ್ಪಾಗುವುದು ಹೀಗೆ ಹಲವಾರು ಸಮಸ್ಯೆಗಳು ಎಲ್ಲರಲ್ಲೂ ಉಂಟಾಗುತ್ತದೆ. ಇಂಥಹ ಸಮಸ್ಯೆಗಳನ್ನು ಮನೆಯಲ್ಲೇ ಸಿಗುವಂತಹ ಕೆಲವು ಪದಾರ್ಥಗಳನ್ನು ಉಪಯೋಗಿಸಿಕೊಂಡು ಕಡಿಮೆ ಮಾಡಿಕೊಳ್ಳಬಹುದು.
ಸೂರ್ಯನ ಕಿರಣಗಳಿಂದಾಗಿ ಟ್ಯಾನಿಂಗ್, ಪಿಗ್ಮೆಂಟೇಶನ್ ಸೇರಿದಂತೆ ಇತರ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಜತೆಗೆ ಕುತ್ತಿಗೆ ಭಾಗದ ಸುತ್ತಲೂ ಬೆವರಿನ ರೂಪದಲ್ಲಿ ಕೊಳಕು ಶೇಖರಣೆಯಾಗಿ ಆ ಭಾಗದಲ್ಲಿ ಕಪ್ಪಾಗಿ, ಕುತ್ತಿಗೆ ಸುತ್ತಲಿನ ಸೌಂದರ್ಯವನ್ನು ಕಡಿಮೆ ಮಾಡುತ್ತದೆ. ಈ ಕಲೆಯನ್ನು ನಿವಾರಿಸಲು ಸೋಪ್, ಕ್ರೀಮ್ ಹಚ್ಚಿದರೂ ಕಲೆ ಹೋಗುವುದಿಲ್ಲ. ಈ ಕಪ್ಪಗಿನ ಕಲೆಯನ್ನು ನಿವಾರಿಸಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದಾಗಿದೆ.
ಆಲೂಗಡ್ಡೆಯನ್ನು ತುರಿದು ಅದರಿಂದ ಬರುವ ರಸವನ್ನು ಕಪ್ಪು ಕಲೆಯಿರುವ ಜಾಗದಲ್ಲಿ ಲೇಪಿಸಬೇಕು. 15 ನಿಮಿಷಗಳ ನಂತರ ತಣ್ಣನೆಯ ನೀರಿನಿಂದ ತೊಳೆಯಬೇಕು. ಹೀಗೆ ಪ್ರತಿನಿತ್ಯ ಮಾಡುವುದರಿಂದ ನಿಮ್ಮ ಕುತ್ತಿಗೆ ಕಲೆ ಹೋಗುತ್ತದೆ.
ಸ್ವಲ್ಪ ಹಾಲು, ಒಂದು ಚಿಟಿಕೆ ಅರಿಶಿಣ, ಕಡಲೆ ಹಿಟ್ಟನ್ನು ಬೆರೆಸಿ ಪೇಸ್ಟ್ ತಯಾರಿಸಿ, ಅದನ್ನು ಕಪ್ಪಗಿನ ಭಾಗಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಬೇಕು. ನಂತರ 10 ನಿಮಿಷಗಳ ನಂತರ ತಣ್ಣನೆಯ ನೀರಿನಿಂದ ತೊಳೆಯುವುದರಿಂದ ಕತ್ತಿನ ಭಾಗವನ್ನು ಸ್ವಚ್ಛಗೊಳಿಸಬಹುದಾಗಿದೆ.
ನಿಂಬೆಹಣ್ಣು ಸಿ ವಿಟಮಿನ್ ಹೊಂದಿದ್ದು, ಇದರ ರಸವನ್ನು ಲೇಪಿಸಿ 10 ನಿಮಿಷದ ನಂತರ ತೊಳೆದರೆ ಇದು ಬಣ್ಣವನ್ನು ಸುಧಾರಿಸುತ್ತದೆ. ಸೌತೆಕಾಯಿಯ ರಸ ಹಾಗೂ ಅಲೊವೆರಾ ಜೆಲ್ ಸೇರಿಸಿ ಪೆಸ್ಟ್ ತಯಾರಿಸಿ ಕುತ್ತಿಗೆ ಭಾಗಕ್ಕೆ ಲೇಪಿಸಿ, 15 ನಿಮಿಷದ ನಂತರ ತೊಳೆಯಬೇಕು.
ಮೊಸರು ಹಾಗೂ ಹಸಿ ಪಪ್ಪಾಯಿ ತಿರುಳನ್ನು ರುಬ್ಬಿಕೊಂಡು ಅದಕ್ಕೆ ಸ್ವಲ್ಪ ಮೊಸರು ಹಾಗೂ ಒಂದು ಚಮಚ ರೋಸ್ ವಾಟರ್ ಬೆರೆಸಿದ ಪೆಸ್ಟ್ ತಯಾರಿಸಿ ಕುತ್ತಿಗೆಗೆ ಹಚ್ಚಬೇಕು. 20 ನಿಮಿಷಗಳ ನಂತರ ನೀರಿನಿಂದ ತೊಳೆಯಬೇಕು.