ಚಿಕ್ಕಬಳ್ಳಾಪುರ: ಅರಣ್ಯದ ಹಸಿರು ಹೊದಿಕೆ ಮಾನವ ಸೇರಿದಂತೆ ಕೋಟ್ಯಂತರ ಜೀವಿಗಳ ಜೀವನಾಡಿಯಾಗಿದ್ದು, ಅಂತರಾಷ್ಟ್ರೀಯ ಮಾನದಂಡಗಳ ಪ್ರಕಾರ ಪ್ರತಿ ದೇಶ ತನ್ನ ಒಟ್ಟು ಭೂಭಾಗದ ಪೈಕಿ ಶೇ.33 ರಷ್ಟು ಅರಣ್ಯ ಪ್ರದೇಶವನ್ನು ಹೊಂದಿರಬೇಕು. ಈ ವಿಷಯದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ 3ನೇ ಸ್ಥಾನದಲ್ಲಿದೆಯೆಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದರು.
ಅವರು ಬುಧವಾರ ಚಿಕ್ಕಬಳ್ಳಾಪುರ ನಗರ ಹೊರವಲಯದ ಸೂಲಾಲಪ್ಪನ ದಿನ್ನೆ ಅರಣ್ಯ ಪ್ರದೇಶದಲ್ಲಿ ಜಿಲ್ಲಾಡಳಿತ, ಅರಣ್ಯ ಇಲಾಖೆ ಆಯೋಜಿಸಿದ್ದ “ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮ” ದಲ್ಲಿ ಹುತಾತ್ಮರಾದ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜಿಲ್ಲಾಡಳಿತದ ಪರವಾಗಿ ಗೌರವ ನಮನ ಸಲ್ಲಿಸಿ ಮಾತನಾಡಿದರು. ಇದನ್ನೂ ಓದಿ: ಅರಣ್ಯ ಹುತಾತ್ಮರು ಮನುಕುಲದ, ಜೀವ ಸಂಕುಲದ ಸಂರಕ್ಷಕರು: ಸಿಎಂ ಸಿದ್ದರಾಮಯ್ಯ
ಜನಸಂಖ್ಯೆಯ ಹೆಚ್ಚಳ, ಅಭಿವೃದ್ಧಿ ಮತ್ತು ಒತ್ತುವರಿ ಮತ್ತಿತರ ಕಾರಣಗಳಿಂದಾಗಿ ಅರಣ್ಯದ ಪ್ರದೇಶದ ವಿಸ್ತೀರ್ಣ ಕಡಿಮೆಯಾಗುತ್ತಿರುವುದು ಆತಂಕದ ವಿಚಾರ. ಒಟ್ಡು ಭೂಭಾಗದಲ್ಲಿ ಶೇ.33 ರಷ್ಟು ಅರಣ್ಯ ಪ್ರದೇಶ ಇರಬೇಕೆಂಬ ಮಾನದಂಡವನ್ನು ನಾವು ಪೂರೈಸಲಾಗುತ್ತಿಲ್ಲದಿರುವುದು ದುರದೃಷ್ಟಕರ. ಉತ್ತಮ ಗಾಳಿ, ಬೆಳಕು, ನೀರು ಮಾನವ ಸೇರಿದಂತೆ ಸಕಲ ಜೀವರಾಶಿಗಳು ಜೀವಂತವಾಗಿರಲು ಮತ್ತು ಆರೋಗ್ಯದಿಂದ ಇರಲು ಅತ್ಯಗತ್ಯವಾಗಿ ಬೇಕಾಗಿದೆ. ಆದರೆ, ಇದಕ್ಕೆ ಅರಣ್ಯ ಎಂಬ ಹಸಿರು ಹೊದಿಕೆ ನಿಗದಿತ ಪ್ರಮಾಣದಲ್ಲಿ ಇರಬೇಕು ಎಂಬುದನ್ನು ಅರಿಯಬೇಕು. ಕೇವಲ ಸಸಿ ನೆಟ್ಟರೆ ಸಾಲದು. ಅದನ್ನು ಮರವಾಗುವಂತೆ ಸಂರಕ್ಷಣೆ ಮಾಡಿದಾಗ ಮಾತ್ರ ಸಸಿ ಹಾಕಿದ್ದು ಸಾರ್ಥಕವಾಗುತ್ತದೆ. ಹಸಿರು ಪ್ರದೇಶವನ್ನು ವಿಸ್ತರಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಆರೋಗ್ಯಕ್ಕೆ ಉತ್ತಮ ಪರಿಸರವನ್ನು ಬಿಟ್ಟು ಹೋಗಬೇಕು. ಅರಣ್ಯ ಸಂರಕ್ಷಣೆ ವಾಡುವ ನಿಟ್ಟಿನಲ್ಲಿ ವಿದ್ಯಾರ್ಥಿ, ಯುವಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ ಚಿನ್ನಪ್ಪಯ್ಯ, ವಲಯ ಅರಣ್ಯ ಅಧಿಕಾರಿ ವಾಸುದೇವ ಮೂರ್ತಿ, ಸಾಮಾಜಿಕ ಅರಣ್ಯ ವಿಭಾಗದ ಎಂ.ಸಿ ಗೀತಾ, ಗಸ್ತು ಅರಣ್ಯ ಪಾಲಕ ರಾಮಪ್ಪ, ಕ್ಷೇಮಾಭಿವೃದ್ಧಿ ಅರಣ್ಯ ನೌಕರರ ಸಂಘ ಸುಬ್ಬಾರೆಡ್ಡಿ, ಹಾಗೂ ಅರಣ್ಯ ಇಲಾಖೆ ಸಿಬಂದ್ದಿ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.