ಹಗ್ಗಜಗ್ಗಾಟಕ್ಕೆ ಬ್ರೇಕ್,  ಕರ್ನಾಟಕದಲ್ಲಿ ಜೋಡೆತ್ತು ಸರ್ಕಾರ

ಹಗ್ಗಜಗ್ಗಾಟಕ್ಕೆ ಬ್ರೇಕ್,  ಕರ್ನಾಟಕದಲ್ಲಿ ಜೋಡೆತ್ತು ಸರ್ಕಾರ

ದೆಹಲಿ: ಕಳೆದ ಮೂರು ನಾಲ್ಕು ದಿನಗಳಿಂದ ಕರ್ನಾಟಕ ರಾಜ್ಯದಲ್ಲಿ ಸಿಎಂ ಪಟ್ಟಕ್ಕೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಪಟ್ಟು ಹಿಡಿದಿದ್ದರು. ಇದರಿಂದ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಫಲಿತಾಂಶ ಬಂದ ದಿನದಿಂದಲೇ ಒಬ್ಬರನ್ನೊಬ್ಬರು ಸರಿಯಾಗಿ ಮಾತನಾಡಿಸಿಲ್ಲವೆಂದು ತಿಳಿದು ಬರುತ್ತಿತ್ತು. ಆದರೆ ಇಂದು ನಾವೆಲ್ಲರೂ ಒಂದೇ ಎನ್ನುವ ಸಂದೇಶವನ್ನು ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಸಂದೇಶವನ್ನು ರವಾನಿಸಿದ್ದಾರೆ.

ಅಂತೂ ಇಂತೂ ಕರ್ನಾಟಕದ ಮುಂಖ್ಯಮಂತ್ರಿ ಯಾರು ಎನ್ನುವ ರಾಜ್ಯದ ಜನತ ಕಾತರಕ್ಕೆ ತೆರೆಬಿದ್ದಿದೆ. ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದ್ದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​ ಮಧ್ಯೆ ಕಾಂಗ್ರೆಸ್​ ಹೈಕಮಾಂಡ್ ಸಂಧಾನ ಸೂತ್ರ ಯಶಸ್ವಿಯಾಗಿದೆ. ಕಳೆದ ನಾಲ್ಕೈದು ದಿನಗಳಿಂದು ದೆಹಲಿಯಲ್ಲಿ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ಬ್ರೇಕ್ ಬಿದ್ದಿದೆ. ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ತೆರೆಮರೆಯಲ್ಲಿ ಪ್ರತ್ಯೇಕವಾಗಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪಟ್ಟು ಹಿಡಿದಿದ್ದರು. ಅಂದಿನಿಂದ ಒಬ್ಬರಿಗೊಬ್ಬರು ಮುಖ ನೋಡಿರಲಿಲ್ಲ. ಇದೀಗ ಅಂತಿಮವಾಗಿ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಎಲ್ಲಾ ಗೊಂದಲಗಳನ್ನು ಬಗೆಹರಿಸಿದ್ದು, ಸಿದ್ದು, ಡಿಕೆಶಿ ಕೈ ಹಿಡಿದು ಮೇಲೆತ್ತಿ ನಾವೆಲ್ಲರೂ ಒಂದಾಗಿದ್ದೇವೆ ಎಂದು ಸಂದೇಶ ರವಾನಿಸಿದರು.

ಸಿಎಂ ಸ್ಥಾನಕ್ಕಾಗಿ ಬಂಡೆದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರನ್ನು ಡಿಸಿಎಂ ಸ್ಥಾನ ಒಪ್ಪುವಂತೆ ಮನವೊಲಿಸುವಲ್ಲಿ ಹೈಕಮಾಂಡ್ ಯಶಸ್ವಿಯಾಗಿದೆ.

ಈ ಮೂಲಕ ಕೆಲವು ದಿನಗಳಿಂದ ನಡೆಯುತ್ತಿದ್ದ ಸಿಎಂ ಆಯ್ಕೆ ಸಂಘರ್ಷ ಇತ್ಯರ್ಥಗೊಂಡಂತಾಗಿದೆ. ಅಲ್ಲದೇ ಒಬ್ಬರೊಗೊಬ್ಬರು ಮುಖ ನೋಡದೇ ಸಿಎಂ ಸ್ಥಾನಕ್ಕೆ ಫೈಟ್ ಮಾಡುತ್ತಿದ್ದ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರನ್ನು ಖರ್ಗೆ ಒಗ್ಗೂಡಿಸಿದ್ದಾರೆ.

ಈ ಮೂಲಕ ಕರ್ನಾಟಕದಲ್ಲಿ ಕೆಲ ಚರ್ಚೆಗಳಿಗೆ ಬ್ರೇಕ್ ಹಾಕಿದ್ದು, ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ದೆಹಲಿಯಿಂದಲೇ ಸಂದೇಶ ರವಾನಿಸಿದರು.

ಕಳೆದ ನಾಲ್ಕೈದು ದಿನಗಳ ನಿರಂತರ ಪ್ರತ್ಯೇಕ ಸರಣಿ ಸಭೆ ಬಳಿಕ ಸಂಧಾನ ಮಾಡಲಾಗಿದ್ದು, ಅಂತಿಮವಾಗಿ ಎಲ್ಲವೂ ಓಕೆ ಆದ ಬಳಿಕ ಕೆಸಿ ವೇಣುಗೋಪಾಲ್ ಅವರು ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಿಗೆ ಉಪಹಾರಕೂಟ ಏರ್ಪಡಿಸುವ ಮೂಲಕ ಒಂದಾಗಿ ಸರ್ಕಾರ ನಡೆಸುವಂತೆ ಸಂದೇಶ ನೀಡಿದರು.

ರಾಹುಲ್ ಗಾಂಧಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ಜೊತೆ ಪ್ರತ್ಯೇಕ ಸಭೆ ಮಾಡಿದ್ದರು. ಆದರೂ ಡಿಕೆ ಶಿವಕುಮಾರ್​ ಸಿಎಂ ಸ್ಥಾನದ ಪಟ್ಟು ಸಡಿಸಿರಲಿಲ್ಲ.

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರನ್ನೇ ಆಯ್ಕೆ ಮಾಡಲಾಗಿದೆ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಆಯ್ಕೆ ಮಾಡಲಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

 

Related