ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳಿ ಜನರಿಗೆ ಮೋಸ ಮಾಡುತ್ತಿದೆ: ಬೊಮ್ಮಾಯಿ

ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳಿ ಜನರಿಗೆ ಮೋಸ ಮಾಡುತ್ತಿದೆ: ಬೊಮ್ಮಾಯಿ

ಹಾವೇರಿ( ಶಿಗ್ಗಾವಿ): ರಾಜ್ಯ ಕಾಂಗ್ರೆಸ್ ಸರ್ಕಾರ ಶಿಗ್ಗಾವಿಗೆ ನೂರು ಕೋಟಿ ರೂ. ಹಣ ಬಿಡುಗಡೆ ಮಾಡಿದ್ದೇವೆ ಎಂದು ಹಸಿ ಸುಳ್ಳು ಹೇಳಿ ಜನರಿಗೆ ಮೋಸ ಮಾಡಿದೆ. ನೂರು ಕೋಟಿ ರೂ. ಬಿಡುಗಡೆ ಮಾಡಿರುವ ದಾಖಲೆ ಇದ್ದರೆ ತೋರಿಸಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ಶಿಗ್ಗಾವಿ ತಾಲೂಕಿನ ಹೋತನಹಳ್ಳಿ, ಚಂದಾಪುರ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಸಣ್ಣ ಪುಟ್ಟ ವಿಷಯಗಳಿಗೂ ಜನರ ಮೇಲೆ ಕೇಸ್ ಹಾಕಿ ಪೊಲಿಸ್ ಸ್ಟೇಷನ್ ಗೆ ಅಲೆದಾಡುವಂತೆ ಮಾಡುತ್ತಿದ್ದಾರೆ. ಪಿಎಸ್ ಐ ಗಳು ಕೊಬ್ಬಿದ್ದಾರೆ. ದಬ್ಬಾಳಿಕೆ ಮಾಡುವ ಸರ್ಕಾರದ ವಿರುದ್ದ ಎಲ್ಲರೂ ನಿಲ್ಲಬೇಕು. ನಾನು ಸದಾ ನಿಮ್ಮ ಜೊತೆಗೆ ಇರುತ್ತೇನೆ. ನಿಮ್ಮ ಕೂದಲಿಗೆ ಕೊಂಕಾಗದ ಹಾಗೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಶಿಗ್ಗಾವಿ ಕ್ಷೇತ್ರದಲ್ಲಿ ಯಾವುದೇ ರೀತಿಯ ಗಲಭೆಗಳು ಆಗಿರಲಿಲ್ಲ. ನಮ್ಮ ನಮ್ಮ ನಡುವೆಯೇ ಮಾತುಕತೆ ಮಾಡಿಕೊಂಡು ಸಮಸ್ಯೆ ಬಗೆಹರಿಸಿಕೊಂಡು ಬರುತ್ತಿದ್ದೇವು. ಈಗ ಪ್ರತಿಯೊಂದಕ್ಕೂ ಪೊಲಿಸ್ ಸ್ಟೇಷನ್ ಗೆ ಹೋಗಬೇಕು. ಅಲ್ಲಿ ಇಬ್ಬರೂ ದುಡ್ಡು ಕಳೆದುಕೊಳ್ಳುವಂತಾಗಿದೆ‌. ಈ ಕ್ಷೇತ್ರದಲ್ಲಿ ಗುಂಡಾ ಸಂಸ್ಕೃತಿ ಪೊಲಿಸ್ ಸ್ಟೇಷನ್ ರಾಜಕೀಯಕ್ಕೆ ಅವಕಾಶ ನೀಡದೇ ಭರತ್ ಬೊಮ್ಮಾಯಿಯನ್ನು ಗೆಲ್ಲಿಸಿಕೊಂಡು ಬರಬೇಕು ಎಂದರು.

ಕಳೆದ ಹದಿನೈದು ವರ್ಷದಲ್ಲಿ ಅತಿ ಹಿಂದುಳಿದ ತಾಲೂಕು ಆಗಿದ್ದ ಶಿಗ್ಗಾವಿಯನ್ನು ಒಂದು ಹಳಿಗೆ ತಂದಿದ್ದೇವೆ. ಅಭಿವೃದ್ಧಿ ಪಥ ನಿರಂತರವಾಗಿ ಮುಂದುವರೆಯಬೇಕು. ಇಲ್ಲದಿದ್ದರೆ ಮತ್ತೆ ಹಿಂದುಳಿಯುತ್ತೇವೆ. ಅಭಿವೃದ್ಧಿ ನಿರಂತರವಾಗಬೇಕೆಂದರೆ ಅಭಿವೃದ್ಧಿ ಮಾಡುವ ಪಕ್ಷಕ್ಕೆ ಬೆಂಬಲ ಕೊಡಬೇಕು. ನಾನು ಏನಾದರೂ ಅಭಿವೃದ್ಧಿ ಮಾಡಿದರೆ ಅದರ ಶ್ರೆಯಸ್ಸು ನಿಮಗೆ ಸಲ್ಲುತ್ತದೆ. ನಾನು ಸಿಎಂ ಆಗಿದ್ದಾಗ ನಿಮ್ಮ ಮತಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡಿದ್ದೇನೆ ಎಂದರು.

ನಾನು ಸಿಎಂ ಆಗಿದ್ದಾಗ ರೈತರ ಮಕ್ಕಳು ವಿದ್ಯಾವಂತರಾಗಲಿ ಎಂದು ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿ ಮಾಡಿದ್ದೆ ಈ ಸರ್ಕಾರ ಅದನ್ನು ನಿಲ್ಲಿಸಿದೆ‌. ಬರ ಪ್ರವಾಹ ಬಂದಾಗ ನೆರವಿಗೆ ಸರ್ಕಾರ ಬರಬೇಕು. ಮಳೆ ಹೆಚ್ಚಾಗಿ ಮುಂಗಾರು ಹಿಂಗಾರು ಎರಡೂ ಹಾನಿಯಾಗಿದೆ. ಆದರೆ ಈ ಸರ್ಕಾರ ರೈತರ ನೆರವಿಗೆ ಬರುತ್ತಿಲ್ಲ. ಸಂಕಷ್ಟದ ಸಂದರ್ಭದಲ್ಲಿ ನೆರವಿಗೆ ಬಾರದ ಸರ್ಕಾರ ಇದ್ದೂ ಸತ್ತಂತೆ ಎಂದು ಹೇಳಿದರು.

Related