ಕಾಂತಾರ 2: ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಕಲಾವಿದನ ಸಾವು

ಕಾಂತಾರ 2: ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಕಲಾವಿದನ ಸಾವು

ಉಡುಪಿ: ಕಾಂತಾರ ಸಿನಿಮಾ ಇಡೀ ದೇಶದಾದ್ಯಂತ ಭಾರಿ ಸದ್ದು ಮಾಡಿದ್ದು ಇದೀಗ ಕಾಂತಾರ-2 ಚಿತ್ರೀಕರಣ ಬರದಿಂದ ಸಾಗುತ್ತಿದ್ದು ಈ ಚಿತ್ರೀಕರಣ ಸಂದರ್ಭದಲ್ಲಿ ಒಂದು ಅನಾಹುತವೇ ನಡೆದುಹೋಗಿದೆ.

ಹೌದು, ಕಾಂತಾರ-2 ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಕಿರಿಯ ಕಲಾವಿರೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದ್ದು ಈ ಕುರಿತು ಇದೀಗ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ.

ಇನ್ನು ನದಿಯಲ್ಲಿ ಮುಳುಗಿ ಕಿರಿಯ ಕಲಾವಿದ ಸಾವನ್ನುಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಾಂತಾರ-2 ಸಿನಿಮಾದ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಮೃತ ಕಲಾವಿದನನ್ನು ಎಂ ಎಫ್ ಕಪಿಲ್ ಎಂದು ಗುರುತಿಸಲಾಗಿದೆ. ಬುಧವಾರ ಈಜಲು ನದಿಗೆ ಇಳಿದಿದ್ದ ಎಂ ಎಫ್ ಕಪಿಲ್ ಅವರು ಬಲವಾದ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ. ಅಗ್ನಿಶಾಮಕ ಇಲಾಖೆ ಮತ್ತು ಸ್ಥಳೀಯ ಅಧಿಕಾರಿಗಳು ತಕ್ಷಣ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿ ನಿನ್ನೆ ರಾತ್ರಿಯೇ ಅವರ ಶವವನ್ನು ಹೊರತೆಗೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಈ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ ಅವರು ತಿಳಿಸಿದ್ದಾರೆ.

2022 ರಲ್ಲಿ ತೆರೆಕಂಡ ‘ಕಾಂತಾರ’ ಚಿತ್ರದಲ್ಲೂ ನಟಿಸಿದ್ದ ಕಪಿಲ್ ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ಜೂನಿಯರ್ ಕಲಾವಿದರಾಗಿ ಅಭಿನಯಿಸುತ್ತಿದ್ದರು. ಇದನ್ನೂ ಓದಿ: ಎಲ್ಲದ್ದಕ್ಕೂ ಯುದ್ಧವೇ ಉತ್ತರ ಅಲ್ಲ: ನಟಿ ರಮ್ಯಾ

ಮುಂಬೈ ಮೂಲದ ಅಖಿಲ ಭಾರತ ಸಿನಿ ಕಾರ್ಮಿಕರ ಸಂಘ(ಎಐಸಿಡಬ್ಲ್ಯೂಎ), ಕೇರಳ ಮೂಲದ ಜೂನಿಯರ್ ಕಲಾವಿದ ಎಂ ಎಫ್ ಕಪಿಲ್ ಅವರ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಎಐಸಿಡಬ್ಲ್ಯೂಎ, ರಿಷಬ್ ಶೆಟ್ಟಿ ಮತ್ತು ಅವರ ಕಂಪನಿಯ ವಿರುದ್ಧ ಎಫ್‌ಐಆರ್ ದಾಖಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಮತ್ತು ಮೃತ ಕಲಾವಿದನ ಹತ್ತಿರದ ಸಂಬಂಧಿಕರಿಗೆ 1 ಕೋಟಿ ರೂ. ಪರಿಹಾರ ಘೋಷಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದೆ.

 

Related