ಇಳಕಲ್, ಆ 18 : ಗುಡೂರಿನಲ್ಲಿ ಹುನಗುಂದ ಶಾಸಕ ದೊಡ್ಡನಗೌಡ ಪಾಟೀರು ಭಾಷಣ ಮಾರುತ್ತಿರುವ ವೇಳೆ ದುಶ್ಕರ್ಮಿಗಳು ಕಲ್ಲು ಎಸೆದು ಪರಾರಿಯಾದ ಘಟನೆ ನಡೆದಿತ್ತು.
ಈ ಸಂಬಂಧ ಅಮೀನಗಡ ಪೋಲಿಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಬಾಗಲಕೋಟ ಎಸ್.ಪಿ. ಜಯಪ್ರಕಾಶ ಅವರು ಡಿ.ಎಸ್.ಪಿ. ಪ್ರಕಾಶ ಮುನ್ನೊಳಿ, ಹುನಗುಂದ ಸಿ.ಪಿ.ಐ. ಸುರೇಶ ಬೆಂಡೆಗುಂಬಳ ಅವರ ಮಾರ್ಗದರ್ಶನದಲ್ಲಿ ಅಮೀನಗಡ ಪಿ.ಎಸ್.ಐ. ಮಲ್ಲಿಕಾರ್ಜುನ ಕುಲಕರ್ಣಿ ಅವರ ತಂಡವನ್ನು ರಚಿಸಿ ಕಿಡಿಗೇಡಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳು ಮುರಡಿ ಗ್ರಾಮದ ನಾಗಪ್ಪ ಬನ್ನಿ ಮತ್ತು ಗುಡೂರಿನ ರವಿಚಂದ್ರ ತಳ್ಳಿಗೇರಿ ಎನ್ನಲಾಗಿದೆ. ಗುಡೂರಿನಲ್ಲಿ ನಡೆದ ಸಂಗೊಳ್ಳಿರಾಯಣ್ಣ ಜಯಂತ್ಯೋತ್ಸವ ಕಾರ್ಯಕ್ರಮದ ರೂವಾರಿ ಮಂಜುನಾಥ ಗೌಡರ ಅವರೊಂದಿಗೆ ವೈಯಕ್ತಿಕ ದ್ವೇಷ ಹೊಂದಿರುವ ಶಂಕೆಯಲ್ಲಿ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿದಾಗ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಕಾರ್ಯಕ್ರಮವನ್ನು ಹಾಳು ಮಾಡುವುದು ಮತ್ತು ಶಾಸಕರನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಲಾಗಿದೆ ಎಂದು ಪೊಲಿಸ್ ಇಲಾಖೆ ತಿಳಿಸಿದೆ. ಕಿಡಿಗೇಡಿಗಳನ್ನು ಬಂಧಿಸಿರುವ ಪೊಲಿಸ್ ತಂಡಕ್ಕೆ ಎಸ್.ಪಿ. ಜಯಪ್ರಕಾಶ ಶ್ಲಾಘನೆ ವ್ಯಕ್ತಪಡಿಸಿದ್ದು. ಯಾರೇ ಕಾನೂನು ಬಾಹಿರ ಕೃತ್ಯಗಳನ್ನು ಎಸಗಿದರೆ ಕೂಡಲೆ ಬಂಧಿಸಿ ಕಠಿಣ ಶಿಕ್ಷಗೆ ಒಳಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.