ದಲಿತರು ಹಿಂದುಳಿದವರು ಭಿಕ್ಷುಕರೇ?: ಸಿಎಂ

ದಲಿತರು ಹಿಂದುಳಿದವರು ಭಿಕ್ಷುಕರೇ?: ಸಿಎಂ

ಕಲಬುರಗಿ: ಹಿಂದುಳಿದವರು, ದಲಿತರು ಭಿಕ್ಷುಕರೇ? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ತಿರುಗೇಟು ನೀಡಿದರು.

ಅವರು ಇಂದು ಸೇಡಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಕುಮಾರ್ ಪಾಟೀಲ್ ಸೇಡಂ ಅವರ ಪರವಾಗಿ ರೋಡ್ ಶೊ ನಡೆಸಿ ಮಾತನಾಡಿದರು.

ಲಿಂಗಾಯತರು, ಒಕ್ಕಲಿಗರು ಭಿಕ್ಷುಕರಲ್ಲ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಅನೇಕ ವರ್ಷದಿಂದ ದಲಿತರನ್ನು ಬಾವಿಯಲ್ಲಿ ಬಿಟ್ಟು ಮತ ಹಾಕಿಸಿಕೊಂಡು ಮತ್ತೆ ಬಾವಿಗೆ ಬಿಡುವ ಕೆಲಸ ಮಾಡುತ್ತಾರೆ. ಆದರೆ ಬೊಮ್ಮಾಯಿ ಸಿಎಂ ಆಗಿ ಬರಬಹುದು ಎಂದು ಅಂದುಕೊಂಡಿರಲಿಲ್ಲ‌. ನಾನು ಸಿಎಂ ಆಗಿ ಮಿಸಲಾತಿ ಜಾರಿಗೆ ತಂದ ಮೇಲೆ ಈಗ ಅವರಿಗೆ ಭಯ ಶುರುವಾಗಿದೆ.

ಖರ್ಗೆ ಮೋದಿಯವರ ಬಗ್ಗೆ ಮಾತನಾಡಿದ್ದಾರೆ. ಮೋದಿವರು ಎಲ್ಲ ಟೀಕೆಗಳನ್ನು ನುಂಗಿ ನಂಜುಂಡ ಆಗಿದ್ದಾರೆ ಎಂದರು.

ಸೇಡಂನಲ್ಲಿ ಬಿಜೆಪಿ ಅಭ್ಯರ್ಥಿ ತೇಲ್ಕೂರು ಗೆದ್ದರೆ ರಾಜ್ಯದಲ್ಲಿ ಬಿಜೆಪಿ ಜನಪರ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಅವರು ಎಲ್ಲಿ ಹೋಗಿದ್ದಾರೆ ಎಲ್ಲ ರಾಜ್ಯಗಳಲ್ಲಿ ‌ಬಿಜೆಪಿ ಗೆದ್ದಿದೆ. ಗುಜರಾತ್, ಉತ್ತರ ಪ್ರದೇಶ, ಉತ್ತರಾಖಾಂಡ್ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕರ್ನಾಟಕದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಅದಕ್ಕೆ ಕಾಂಗ್ರೆಸ್ ನವರಿಗೆ ಭಯ ಶುರುವಾಗಿದೆ. ಹೀಗಾಗಿ ಮೋದಿಯವರ ವಿರುದ್ದ ಹತಾಶರಾಗಿ ಮಾತನಾಡುತ್ತಿದ್ದಾರೆ ಎಂದರು.

ನಂಬರ್ ಒನ್ ರಾಜ್ಯ ಮಾಡುತ್ತೇವೆ

ಕಾಂಗ್ರೆಸ್ ನವರು ಗ್ಯಾರೆಂಟಿಗಳು ಕೊಡುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ. ನಾವು ಅದನ್ನು ಈಗಾಗಲೇ ಬಜೆಟ್ ನಲ್ಲಿ ಘೋಷಣೆ ಮಾಡಿದ್ದೇವೆ. ರಾಹುಲ್ ಗಾಂಧಿಗೆ ಇವರು ಹೇಳುವುದು ಅರ್ಥವಾಗುವುದಿಲ್ಲ. ಅವನು ಘೋಷಣೆ ಮಾಡುತ್ತಾನೆ.

ನಮ್ಮದು ಡಬಲ್ ಎಂಜಿನ್ ಸರ್ಕಾರ, ಕಲ್ಯಾಣ ಕರ್ನಾಟಕದ ಕಲ್ಯಾಣ ಮಾಡುತ್ತೇವೆ. ಮುಂದಿನ ಬಾರಿ ಅಧಿಕಾರಕ್ಕೆ ಬಂದು ರಾಜ್ಯವನ್ನು ನಂಬರ್ ಒನ್ ರಾಜ್ಯ ಮಾಡುತ್ತೇವೆ.

ರಾಜಕುಮಾರ್ ಪಾಟೀಲ್ ತೇಲ್ಕೂರು ಅವರು ಹಠ ಹಿಡಿದು ಕೆಲಸ ಮಾಡುತ್ತಾರೆ‌. ಅವರು ಗುಲಬರ್ಗಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಪಡೆದು _4 ಲಕ್ಷ ರೈತರಿಗೆ 1100 ಕೋಟಿ ಸಾಲ ನೀಡಿದ್ದಾರೆ. ನೀವು ಅವರನ್ನು ಗೆಲ್ಲಿಸಿ ಸುಭದ್ರ ಸರ್ಕಾರ ರಚನೆಗೆ ಆಶೀರ್ವದಿಸಿ ಎಂದು ಮನವಿ ಮಾಡಿದರು.

Related