ಕರ್ನಾಟಕ ವಿರೋಧಿ ಬಜೆಟ್: ಹೆಚ್ ಸಿ ಮಹದೇವಪ್ಪ

ಕರ್ನಾಟಕ ವಿರೋಧಿ ಬಜೆಟ್: ಹೆಚ್ ಸಿ ಮಹದೇವಪ್ಪ

ಬೆಂಗಳೂರು: ಜನ ಸಾಮಾನ್ಯರ ಪರವಾಗಿ ಎಂದಿಗೂ ಕೆಲಸ ಮಾಡದೇ ಬರೀ ಕಾರ್ಪೊರೇಟ್ ಉದ್ಯಮಿಗಳ ಪರವಾಗಿ ಕೆಲಸ ಮಾಡುತ್ತಲೇ ಬಂದಿರುವ ಕೇಂದ್ರ ಸರ್ಕಾರವು ಶ್ರಮಿಕ ವರ್ಗವನ್ನು ವಂಚಿಸುವ ತನ್ನ ಹೀನ ಪ್ರವೃತ್ತಿಯನ್ನು ಮುಂದುವರೆಸಿದೆ ಎಂದು ಸಚಿವ ಡಾ ಹೆಚ್ ಸಿ ಮಹದೇವಪ್ಪ ಕೇಂದ್ರ ಬಜೆಟ್‌ ವಿರುದ್ದ ಗುಡುಗಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, 50 ಲಕ್ಷದ 65 ಸಾವಿರ ಕೋಟಿ ಗಾತ್ರದ ಬಜೆಟ್ ನಲ್ಲಿ ಜನಪರವಾಗಿ ಹೇಳಿಕೊಳ್ಳಬಹುದಾದ ಒಂದೇ ಒಂದು ಯೋಜನೆಯೂ ಸಹ ಇಲ್ಲದ ಕೇಂದ್ರದ ಬಜೆಟ್ ಕರ್ನಾಟಕ ವಿರೋಧಿಯಾಗಿದ್ದು ರಾಜ್ಯ ನೀಡುವ ತೆರಿಗೆ ಹಣಕ್ಕೆ ಪ್ರತಿಯಾಗಿ ಅವಮಾನವನ್ನು ನಮಗೆ ಉಡುಗೊರೆಯಾಗಿ ನೀಡಿದೆ.

ಮಧ್ಯಮ ವರ್ಗಕ್ಕೆ 12 ಲಕ್ಷದ ವರೆಗೆ ಆದಾಯ ತೆರಿಗೆ ವಿನಾಯ್ತಿ ಎಂದು ಹೇಳಿ ಆ ಮೂಲಕ ಪ್ರಚಾರ ಪಡೆಯಲು ಪ್ರಯತ್ನಿಸುತ್ತಿರುವ ಕೇಂದ್ರ ಸರ್ಕಾರವು ನಿಗದಿ ಪಡಿಸಿರುವ ತೆರಿಗೆ ಮಿತಿಯ slab ನಲ್ಲಿ 8 ರಿಂದ 12 ಲಕ್ಷದವರೆಗಿನ ಆದಾಯ ತೆರಿಗೆಗೆ 10% ತೆರಿಗೆ ಎಂದು ನಮೂದಿಸಿದ್ದು ಜನರನ್ನು ಅಸ್ಪಷ್ಟತೆಗೆ ನೂಕುವ ಕೆಲಸ ಮಾಡಿದೆ.

ಈಗಾಗಲೇ ಇವರ ಹಿಂದಿನ ಘೋಷಣೆಗಳು ಬಹುತೇಕ ಸುಳ್ಳೆಂದು ಸಾಬೀತಾಗಿದ್ದು ಈ ಗೊಂದಲಗಳೂ ಕೂಡಾ ಕೇಂದ್ರ ಸರ್ಕಾರದ ವಂಚನೆಯ ತಂತ್ರವಾಗಿದೆ ಎಂದು ನಾವು ಊಹಿಸಬಹುದಾಗಿದೆ. ಇದನ್ನೂ ಓದಿ: ಚೊಂಬು ಕೊಡುವ ಅಭಿಯಾನವನ್ನು ಕೇಂದ್ರ ಮುಂದುವರೆಸಿದೆ: ಸಿಎಂ

ಹಿಂಬಾಲಕರ ಮೂಲಕ ತನ್ನನ್ನು ವಿಶ್ವಗುರು ಎಂದು ಹೇಳಿಕೊಳ್ಳುವ ಪ್ರಧಾನಿಗಳ ಆಡಳಿತದಲ್ಲಿ ದೇಶದ ಸಾಲವು ಮತ್ತೆ 15.86 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದ್ದು ಯಾವುದೇ ಯೋಜನೆಗಳಿಲ್ಲದೇ ಯಾರ ಜೇಬು ತುಂಬಿಸಲು ಇವರು ಇಷ್ಟೊಂದು ಸಾಲ ಮಾಡುತ್ತಿದ್ದಾರೆ ಎಂಬುದು ಸದ್ಯದ ಪ್ರಶ್ನೆಯಾಗಿದೆ.

ಇನ್ನು ಕಾರ್ಪೊರೇಟ್ ತೆರಿಗೆಯ ಪ್ರಮಾಣವು ಯಥಾಸ್ಥಿತಿಯಲ್ಲಿ ಮುಂದುವರೆದಿದ್ದು, ಸರ್ಕಾರದಿಂದ ಕಾರ್ಪೊರೇಟ್ ಗಳ ಲಕ್ಷಾಂತರ ಕೋಟಿ ಸಾಲ ಮನ್ನಾ ಹೊರತಾಗಿಯೂ ಕಂಪನಿಗಳು ಏಳಿಗೆ ಆಗದೇ ಹಾಗೇ ಉಳಿದಿದ್ದು ಸರ್ಕಾರವು ಖಾಸಗಿಯವರ ಸಾಲವನ್ನು ಜನರ ಮೇಲೆ ಹೊರಿಸುವ ಕೆಲಸ ಮಾಡುತ್ತಿವೆ. ಮುಖ್ಯವಾಗಿ ಬಜೆಟ್ ನಲ್ಲಿ ಎಲ್ಲಿಯೂ ಕೂಡಾ ಉದ್ಯೋಗ ಸೃಷ್ಟಿಯ ಕುರಿತು ಮಾತನಾಡದ ಕೇಂದ್ರ ಸರ್ಕಾರವು ಯುವಕರ ಮೇಲಿನ ತನ್ನ ತಿರಸ್ಕಾರದ ಧೋರಣೆಯನ್ನು ಮುಂದುವರೆಸಿದೆ ಎಂದರು.

ಅತಿ ಮುಖ್ಯವಾಗಿ ದೇಶದ ಬೆನ್ನೆಲುಬು ಆಗಿರುವ ರೈತರಿಗೆ ಯಾವುದೇ ರೀತಿಯ ಉಪಯುಕ್ತ ಯೋಜನೆಗಳನ್ನು ನೀಡದ ಕೇಂದ್ರ ಸರ್ಕಾರವು ತಾನು ಸದಾ ರೈತ ವಿರೋಧಿ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.

 

Related