ರಾಜ್ಯದಲ್ಲಿ ಪತ್ರಕರ್ತ ಸೇರಿ ಒಂದೇ ದಿನ 15 ಕೊರೊನಾ ಪ್ರಕರಣಗಳು

ರಾಜ್ಯದಲ್ಲಿ ಪತ್ರಕರ್ತ ಸೇರಿ ಒಂದೇ ದಿನ 15  ಕೊರೊನಾ ಪ್ರಕರಣಗಳು

ಬೆಂಗಳೂರು: ನಗರದ ಬಿಬಿಎಂಪಿಯ ಕಂಟೈನ್ ಮೆಂಟ್ ವಲಯಕ್ಕೆ ಭೇಟಿ ನೀಡಿದ ಪತ್ರಕರ್ತರೋರ್ವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ರಾಜ್ಯದಲ್ಲಿ 24 ಗಂಟೆಗಳಲ್ಲಿ ಒಟ್ಟು 15 ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 489ಕ್ಕೆ ಏರಿಕೆಯಾಗಿದೆ.

ಪ್ರಸಕ್ತ ಸೋಂಕಿಗೊಳಗಾಗಿರುವ ಪತ್ರಕರ್ತ ಕರ್ತವ್ಯದ ಮೇರೆಗೆ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಇವರನ್ನು ಪರೀಕ್ಷೆಗೊಳಪಡಿಸಿದಾಗ ಸೋಂಕಿನ ಲಕ್ಷಣಗಳು ಕಂಡುಬಂದಿದೆ ಎನ್ನಲಾಗಿದೆ.

ಬೆಂಗಳೂರು 6, ಬೆಳಗಾವಿ 6, ಮಂಡ್ಯ 1, ಚಿಕ್ಕಬಳ್ಳಾಪುರ 1, ದಕ್ಷಿಣಕನ್ನಡ 1 ಪ್ರಕರಣ ವರದಿಯಾಗಿದೆ. ಬೆಂಗಳೂರಿನ ಹೊಂಗಸಂದ್ರದ ಬಿಹಾರಿ ಮೂಲದ ಕಾರ್ಮಿಕನ ಸಂಪರ್ಕದಲ್ಲಿದ್ದ ನಾಲ್ವರಲ್ಲಿ ಸೋಂಕು ಪತ್ತೆಯಾಗಿದೆ.

ಆಂಧ್ರಪ್ರದೇಶದ ಹಿಂದೂಪುರ ಮತ್ತು ಅನಂತಪುರಕ್ಕೆ ಪ್ರಯಾಣ ಬೆಳೆಸಿದ ಹಿನ್ನಲೆಯುಳ್ಳ ಚಿಕ್ಕಬಳ್ಳಾಪುರದ 18 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದೆ. ಜೊತೆಗೆ, ದಕ್ಷಿಣ ಕನ್ನಡದ ಬಂಟ್ವಾಳ 33 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 489ಕ್ಕೇರಿದೆ. 18 ಜನರು ಮೃತಪಟ್ಟಿದ್ದು, 153 ಜನರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

Related