ನೀರಿನಲ್ಲಿ ಕೊಚ್ಚಿಹೋಗಿ ಬಾಲಕಿ ಸಾವು..!

  • In Crime
  • August 9, 2022
  • 303 Views
ನೀರಿನಲ್ಲಿ ಕೊಚ್ಚಿಹೋಗಿ ಬಾಲಕಿ ಸಾವು..!

ಉಡುಪಿ ಆಗಸ್ಟ್ 09: ಕರಾವಳಿ ಭಾಗದಲ್ಲಿ ಮಳೆಯ ರುದ್ರನರ್ತನ ಮುಂದುವರಿದಿದೆ. ಮಳೆಗಾಲ ಬಂತೆಂದರೆ ಈ ಭಾಗದ ಹಳ್ಳಿಗಳ ತೋಡು, ಹಳ್ಳಗಳಲ್ಲಿ ಪ್ರವಾಹ, ನೆರೆ ಉಂಟಾಗುವುದು ಸಾಮಾನ್ಯ. ಪುಟ್ಟ ಮಕ್ಕಳಿಗೆ ಶಾಲೆಗೆ ಹೋಗಲು ಭಾರೀ ಮಳೆಯ ನಡುವೆ ಹರಸಾಹಸಪಡಬೇಕು. ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನಲ್ಲಿ ಶಾಲೆ ಮುಗಿಸಿ ನಿನ್ನೆ ಸಂಜೆ ಮನೆಗೆ ಮರುಳುತ್ತಿದ್ದ 2ನೇ ತರಗತಿ ಬಾಲಕಿ ಸನ್ನಿಧಿ ಹೊಳೆಗೆ ಅಡ್ಡಲಾಗಿ ಹಾಕಿರುವ ಸಣ್ಣ ಕಾಲುಸಂಕ ದಾಟುವಾಗ ಜಾರಿಬಿದ್ದು ನೀರಿನಲ್ಲಿ ಕೊಚ್ಚಿಹೋಗಿದ್ದಾಳೆ.

ಬೈಂದೂರು ತಾಲ್ಲೂಕಿನ ಕಾಲ್ತೋಡು ಗ್ರಾಮದಲ್ಲಿ ದುರ್ಘಟನೆ ನಡೆದಿದ್ದು ಆಕೆಯ ಪತ್ತೆಗೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ಸ್ಥಳೀಯರು ತೀವ್ರ ಶೋಧ ನಡೆಸುತ್ತಿದ್ದರೂ ಸನ್ನಿಧಿ ಇನ್ನೂ ಪತ್ತೆಯಾಗಿಲ್ಲ. ಬೊಳಂಬಳ್ಳಿಯ ಮಕ್ಕಿಮನೆ ಮನೆ ಪ್ರದೀಪ್ ಪೂಜಾರಿ ಹಾಗೂ ಸುಮಿತ್ರಾ ಅವರ ಪುತ್ರಿ ಸನ್ನಿಧಿಯಾಗಿದ್ದಾಳೆ.
ಚಪ್ಪರಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಸನ್ನಿಧಿ ನಿನ್ನೆ ಸೋಮವಾರ ಮನೆಗೆ ಆಯಾ ಜೊತೆ ಹಿಂತಿರುಗುವಾಗ ಬೀಜಮಕ್ಕಿ ಎಂಬಲ್ಲಿ ಈ ಅವಘಡ ನಡೆದಿದೆ. ಸ್ಥಳಕ್ಕೆ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಭೇಟಿ ಕೊಟ್ಟು ಪರಿಸ್ಥಿತಿ ಅವಲೋಕಿಸಿದ್ದಾರೆ. ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಕಾಲ್ತೋಡು ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.

Related