ದಾವಣಗೆರೆ, ಆ03: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ 75ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಿರುವ ಅಮೃತ ಮಹೋತ್ಸವಕ್ಕೆ ಬರುತ್ತಿರುವ ಅಭಿಮಾನಿಗಳಿಗೆ ಮಳೆ ಮತ್ತು ಟ್ರಾಫಿಕ್ ಜಾಮ್ ನಿರಾಸೆ ಮೂಡಿಸಿದೆ.
ದಾವಣಗೆರೆಯಲ್ಲಿ ಸುರಿಯುತ್ತಿರುವ ಜಿಟಿಜಿಟಿ ಮಳೆ ರಸ್ತೆಗಳಲ್ಲಿ ಜನ ತುಂಬಿದ್ದಾರೆ. ಸಿದ್ದರಾಮೋತ್ಸವಕ್ಕೆ ಬಂದಿರುವ ವಾಹನಗಳಿಂದಾಗಿ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದೆ. ಸುಮಾರು 3 ಕಿ. ಮೀ. ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಅಮೃತ ಮಹೋತ್ಸವ ನಡೆಯಲಿರುವ ಶ್ಯಾಮನೂರು ಪ್ಯಾಲೇಸ್ ಹೋಗಲು ಸಿದ್ದರಾಮಯ್ಯ ಅಭಿಮಾನಿಗಳು ಪರದಾಟ ಪಡುತ್ತಿದ್ದಾರೆ. ಇದರ ಜೊತೆಯೇ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶುಭವಾಗಲಿ ಎಂಬ ಘೋಷಣೆಗಳು ಕೇಳಿ ಬರುತ್ತಿವೆ.
ಬಾದಾಮಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಿದ್ದರಾಮಯ್ಯ ಅವರ ಅಭಿಮಾನಿಗಳು ದಾವಣಗೆರೆಗೆ ಬರುತ್ತಿದ್ದಾರೆ. ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ಸಂಚಾರ ದಟ್ಟಣೆ ಉಂಟಾಗಿದೆ.
ದಾವಣಗೆರೆಯ ಹೊರವಲಯದ ಕುಂದವಾಡದ ಬಳಿ ಇರುವ ಶಾಮನೂರು ಅರಮನೆ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು ಸಮಾರಂಭಕ್ಕೆ ಕ್ಷಣಕಣನೆ ಆರಂಭವಾಗಿದೆ.
ಬುಧವಾರ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಮಧ್ಯಾಹ್ನ 12 ಗಂಟೆಗೆ ಸಿದ್ದರಾಮಯ್ಯ ಬರಲಿದ್ದಾರೆ. 12.30ಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ.