ಬೆಳಗಾವಿ, ಆಗಸ್ಟ್ 09: ಮಳೆಯಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿ ಸಂಭವಿಸಿದ್ದು, ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ರೌಂಡ್ಸ್ ಹಾಕಿದ್ದಾರೆ. ಕೇಶವ ನಗರ, ವಡಗಾವಿ ಭರತ ನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿ ಹಾಗೂ ಖಾನಾಪುರ ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ವರುಣನ ಅಬ್ಬರ ಮುಂದುವರಿದಿದೆ. ಅನೇಕ ಬಡಾವಣೆಗಳಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಅದೃಷ್ಠವಶಾತ್ ಕುಟುಂಬವೊಂದು ಅಪಾಯದಿಂದ ಪಾರಾಗಿದೆ.
ಇನ್ನೂ ಬೆಳಗಾವಿ ತಾಲೂಕು, ಖಾನಾಪುರ ತಾಲೂಕಿನಲ್ಲಿ ಶಾಲಾಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬೆಳಗಾವಿಯಲ್ಲಿ ಮಳೆಯಿಂದ ಅನೇಕ ಬಡಾವಣೆಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಜಮೀನುಗಳು ಜಲಾವೃತಗೊಂಡಿವೆ. ಬೆಳಗಾವಿ ನಗರದಲ್ಲಿ ನಿನ್ನೆ ರಾತ್ರಿಯಿಂದ ಭಾರೀ ಪ್ರಮಾಣದಲ್ಲಿ ಮಳೆಯ ಅಬ್ಬರಿಸುತ್ತಿದ್ದು, ನಗರದಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಶಿವಾಜಿ ನಗರ, ಜಯ ನಗರ, ವೀರಭದ್ರ ನಗರದ 6ನೇ ಕ್ರಾಸ್ ನಲ್ಲಿ ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ. ಮನೆಯಿಂದ ನೀರು ಹೊರಗೆ ಹಾಕಲು ಇಲ್ಲಿನ ನಿವಾಸಿಗಳು ಹರಸಾಹಸಪಟ್ಟರು. ಇನ್ನೂ ಜಯ ನಗರದಲ್ಲಿ ಕಾರು ಮುಳುಗಡೆಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.