ಬೆಂಗಳೂರು ಆಗಸ್ಟ್ 09: ಇದು ಸ್ವತಂತ್ರ ಭಾರತ. ಇಲ್ಲಿ ಪಾಳೇಗಾರಿಕೆ ನಡೆಸಲು ಜಮೀರ್ ಸಾದಿಕ್ ಅವರ ಪ್ರೋತ್ಸಾಹ ಇದೆಯೇ ಎಂದು ಮಾಜಿ ಸಚಿವ ಮತ್ತು ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಜಮೀರ್, ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ಇಲ್ಲ. ಆದರೆ ಸ್ವಾತಂತ್ರ್ಯೋತ್ಸವವನ್ನು ನಾವೇ ಅದ್ಧೂರಿಯಾಗಿ ಆಚರಿಸುತ್ತೇವೆ ಎಂದು ಹೇಳಿದ್ದರು.
ಜಮೀರ್ ಅವರ ಈ ಹೇಳಿಕೆ ವಿರುದ್ಧ ಟ್ವೀಟ್ ಮಾಡುವ ಮೂಲಕ ಬಿಜೆಪಿ ವಾಗ್ದಾಳಿ ನಡೆಸಿದೆ. ಈದ್ಗಾ ಮೈದಾನದಲ್ಲಿ ಇಷ್ಟು ದಿನ ಧ್ವಜಾರೋಹಣ ನಡೆಸಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದ ಜಮೀರ್ ಅಹ್ಮದ್ ಖಾನ್ ಈಗ ಗಣೇಶೋತ್ಸವಕ್ಕೆ ವಿರೋಧಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಕೃಪಾಶೀರ್ವಾದದಿಂದ ಚಾಮರಾಜಪೇಟೆಯ ಈದ್ಗಾ ಮೈದಾನ ಅಂದಿನ ಲಾಲ್ಚೌಕ್ ಆಗಿ ಪರಿವರ್ತನೆ ಆಗುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.