ಚಾಮರಾಜನಗರ, ಆ 06: ಪ್ರಸಿದ್ಧ ಪ್ರವಾಸಿತಾಣ, ಭಾರತದ ನಯಾಗರ ಎಂದು ಕರೆಯುವ ಹನೂರು ತಾಲೂಕಿನ ಹೊಗೆನಕಲ್ ಜಲಪಾತ ಮಳೆಯ ಆರ್ಭಟಕ್ಕೆ ಹರಿಯುತ್ತಿರುವ ನೀರಿನ ಪ್ರಮಾಣಕ್ಕೆ ಕಣ್ಮರೆಯಾಗಿದೆ. ಜಲಪಾತದ ಮೇಲೆ ನೀರು ಹರಿಯುತ್ತಿರುವುದರಿಂದ ಜಲಪಾತವೇ ಮುಳುಗಡೆಯಾಗಿದೆ.
ಕರ್ನಾಟಕ ಭಾಗದಲ್ಲಿ ಭಾರೀ ನೀರು ಹರಿಯುತ್ತಿದೆ. ನದಿ ಅಂಚಿನ ಆಲಂಬಾಡಿ, ಜಂಬಲ್ಪಟ್ಟಿ ,ಆತೂರು ಗ್ರಾಮಗಳು ಪ್ರವಾಹ ಭೀತಿ ಎದುರಿಸುತ್ತಿವೆ. ಹೊಗೆನಕಲ್, ಗೋಪಿನಾಥಂಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಸೇತುವೆ ನೀರಿನಿಂದ ಆವೃತಗೊಂಡಿದ್ದು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಪ್ರವಾಸಿಗರನ್ನು ವಾಪಾಸ್ ಕಳುಹಿಸಲಾಗುತ್ತಿದೆ.
ಗೋಪಿನಾಥಂಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಸೇತುವೆ ನೀರಿನಿಂದ ಆವೃತವಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಮೆಟ್ಟೂರು ಜಲಾಶಯದಲ್ಲಿ ಹಿನ್ನೀರು ಹೆಚ್ಚಳವಾಗಿರುವ ಕಾರಣ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಪರಿಣಾಮ ಆಲಂಬಾಡಿ, ಜಂಬಲ್ ಪಟ್ಟಿ ಮಾರಿಕೊಟ್ಟಾಯಂ ಹಾಗೂ ಹೊಗೆನಕಲ್ ಜಲಪಾತಕ್ಕೆ ತೆರಳುವ ಮಾರ್ಗ ಕಡಿತಗೊಂಡಿದೆ.
ಜಿಲ್ಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ ಅತೀ ಹೆಚ್ಚು ಮಳೆ ಬೀಳುವ ವರದಿ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾದ್ಯಂತ ಎಲ್ಲಾ ಶಾಲೆ ಹಾಗೂ ಅಂಗನವಾಡಿಗಳಿಗೆ ಶನಿವಾರವೂ ರಜೆ ಮುಂದುವರಿದಿದೆ. ಮಕ್ಕಳ ಹಿತದೃಷ್ಟಿಯಿಂದ ಗುರುವಾರವೇ ಜಿಲ್ಲಾಧಿಕಾರಿ ರಜೆ ಘೋಷಣೆ ಮಾಡಿದ್ದಾರೆ.
ಹವಾಮಾನ ಇಲಾಖೆ ಬೆಂಗಳೂರು ಸೇರಿದಂತೆ ಮುಂದಿನ ನಾಲ್ಕು ದಿನಗಳವರೆಗೆ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಸೂಚನೆ ನೀಡಿದೆ. ರಾಜಧಾನಿಯಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿದೆ. ಶನಿವಾರವೂ ಮೋಡ ಮುಸುಕಿದ ವಾತಾವರಣವಿದ್ದು, ಮಳೆ ಬೀಳುವ ಸಾಧ್ಯತೆ ಹೆಚ್ಚಿದೆ.