ಮೈಸೂರು, ಜುಲೈ 22: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪಗೆ ಕ್ಲೀನ್ ಚಿಟ್ ನೀಡಲಾಗಿದೆ. ಶುಕ್ರವಾರ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡದೇವಿಯ ಆಶೀರ್ವಾದ ಪಡೆದರು.
ಶುಕ್ರವಾರ ಕುಟುಂಬ ಸಮೇತರಾಗಿ ಈಶ್ವರಪ್ಪ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು. ಇಂದು ಆಷಾಢದ ಕೊನೆ ಶುಕ್ರವಾರ. ಈ ಹಿನ್ನಲೆಯಲ್ಲಿ ಕುಟುಂಬ ಸಮೇತ ತಾಯಿ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ, ದರ್ಶನ ಪಡೆದು ಆಶೀರ್ವಾದ ಪಡೆದರು. ಈ ವೇಳೆ ಈಶ್ವರಪ್ಪರವರ ಜೊತೆ ಪತ್ನಿ ಜಯಲಕ್ಷ್ಮೀ ಈಶ್ವರಪ್ಪ, ಪುತ್ರ ಕೆ.ಈ. ಕಾಂತೇಶ್ ಮತ್ತು ಕುಟುಂಬ ಸದಸ್ಯರು ಇದ್ದರು.
ಗುರುವಾರ ಶಿವಮೊಗ್ಗದ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಬಿಜೆಪಿ ನಗರ ಘಟಕ ವತಿಯಿಂದ ವಿಶೇಷ ಪೂಜೆ ನಡೆದಿತ್ತು. ಈ ವೇಳೆ ಈಶ್ವರಪ್ಪ ಪೂಜೆಯಲ್ಲಿ ಪಾಲ್ಗೊಂಡಿದ್ದರು.ಇಂದು ಮೈಸೂರಿಗೆ ಭೇಟಿ ನೀಡಿದ್ದಾರೆ.